ADVERTISEMENT

ಹೆಬ್ರಿ: ಸಂಭ್ರಮದಿಂದ ಸಂಪನ್ನಗೊಂಡ ಮದುಮಕ್ಕಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 3:00 IST
Last Updated 18 ಆಗಸ್ಟ್ 2025, 3:00 IST
ಬಾಳೆಹಣ್ಣಿಗೊಲಿದ ಭಗವಂತ ಪ್ರಸಿದ್ಧಿಯ ಇತಿಹಾಸ ಪ್ರಸಿದ್ಧ ಕದಳೀಪ್ರಿಯ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಭಾನುವಾರ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆಯಲ್ಲಿ ಬಾಳೆಗೊನೆ ಸೇವೆ ನಡೆಯಿತು
ಬಾಳೆಹಣ್ಣಿಗೊಲಿದ ಭಗವಂತ ಪ್ರಸಿದ್ಧಿಯ ಇತಿಹಾಸ ಪ್ರಸಿದ್ಧ ಕದಳೀಪ್ರಿಯ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಭಾನುವಾರ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆಯಲ್ಲಿ ಬಾಳೆಗೊನೆ ಸೇವೆ ನಡೆಯಿತು   

ಹೆಬ್ರಿ: ಬಾಳೆಹಣ್ಣಿಗೊಲಿದ ಭಗವಂತ ಪ್ರಸಿದ್ಧಿಯ ಕದಳೀಪ್ರಿಯ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆ ಭಾನುವಾರ ನಡೆಯಿತು.

ಮಳೆಯನ್ನೂ ಲೆಕ್ಕಿಸದೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಹಿನ್ನೆಲೆ: 12 ಸಂಕ್ರಮಣದಲ್ಲಿ ಸಿಂಹ ಸಂಕ್ರಮಣ ಅತ್ಯಂತ ವಿಶೇಷವಾಗಿದ್ದು, ಈ ಸಂಕ್ರಮಣದಂದು ಪೆರ್ಡೂರಿನಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಸಿಂಹ ಸಂಕ್ರಮಣ ‘ಮದುಮಕ್ಕಳ ಜಾತ್ರೆ’ ಎಂದೇ ಪ್ರಖ್ಯಾತಿ ಪಡೆದಿದ್ದು, ಮದುಮಕ್ಕಳು ಮನೆಯ ಹಿರಿಯರೊಂದಿಗೆ ಬಂದು ಗಂಡನ ಮನೆಗೆ ತೆರಳುವುದು ಈ ಸಂಕ್ರಮಣದ ವಿಶೇಷವಾಗಿದೆ. ಹಾಗಾಗಿ ನವ ದಂಪತಿಗಳು ಜತೆಯಾಗಿ ಬಂದು ಅನಂತಪದ್ಮನಾಭ ದೇವರ ದರ್ಶನ ಮಾಡಿ, ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ADVERTISEMENT

ಆಷಾಢ ಕಳೆದು ಸಿಂಹ ಮಾಸದ ಈ ಸಂಕ್ರಮಣ ಮದುಮಕ್ಕಳಿಗೆ ವಿಶೇಷವಾಗಿದ್ದು, ಕದಳೀಪ್ರಿಯ ಅನಂತ ಪದ್ಮನಾಭ ದೇವರ ದರ್ಶನಕ್ಕೆ ಉಡುಪಿ ಜಿಲ್ಲೆಯೂ ಸೇರಿದಂತೆ ನೆರೆಯ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದ ಭಕ್ತರು ಬರುವುದು ಇಲ್ಲಿಯ ವಿಶೇಷ.

ಬಾಳೆಹಣ್ಣಿಗೊಲಿದ ಭಗವಂತ ಶ್ರೀಅನಂತ ಪದ್ಮನಾಭ: ಈ ಸನ್ನಿಧಿಯಲ್ಲಿ ಹಲವು ವರ್ಷಗಳಿಂದ ಭಕ್ತರಿಂದ ತಮ್ಮ ಇಷ್ಟಾರ್ಥ ಈಡೇರಿಕೆಗೆ ಬಾಳೆಹಣ್ಣಿನ ಸೇವೆ ನಡೆದುಕೊಂಡು ಬರುತ್ತಿದೆ. ಕೆಲವರು ಸಾವಿರ ಬಾಳೆಹಣ್ಣು ಸೇವೆ, 500 ಬಾಳೆಹಣ್ಣು ಸೇವೆ, ದಿನಕ್ಕೊಂದು ಬಾಳೆಹಣ್ಣು, ಸಿಬ್ಲಹಣ್ಣು ಹೀಗೆ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ವಿವಿಧ ರೀತಿಯ ಬಾಳೆಹಣ್ಣಿನ ಸೇವೆಯನ್ನು ದೇವರಿಗೆ ಸಲ್ಲಿಸುತ್ತಾರೆ. ಭಾನುವಾರ ಭಕ್ತಾದಿಗಳಿಂದ 15 ಸಾವಿರಕ್ಕೂ ಅಧಿಕ ಬಾಳೆಹಣ್ಣಿನ ಸೇವೆ, 264 ಬಾಳೆಗೊನೆ ಸೇವೆ ನಡೆಯಿತು.

ಅರ್ಚಕರಾದ ಸುಧಾಕರ ಆಡಿಗ, ರಘು ಪ್ರಸಾದ್ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸತ್ಯನಾರಾಯಣ, 124 ಪೂಜೆ–ಸೇವೆ ನಡೆದವು. ಮಧ್ಯಾಹ್ನ ದೇವರ ಬಲಿ ಮೂರ್ತಿ ಉತ್ಸವ ನಡೆಯಿತು. ಹಿರಿಯಡಕ ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಸುಲಭ ದರ್ಶನ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಮಾಡಲಾಗಿತ್ತು.

ಭಕ್ತರ ಅನುಕೂಲಕ್ಕಾಗಿ ದೇವಳದ ವತಿಯಿಂದ ಮಧ್ಯಾಹ್ನ ದೇವಸ್ಥಾನದಲ್ಲಿ 7 ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಸಮಿತಿಯ ಸದಸ್ಯರಾದ ರಾಜಕುಮಾರ್ ಶೆಟ್ಟಿ ದೊಡ್ಮನೆ, ದಿನೇಶ ಪೂಜಾರಿ ಗರಡಿ ಮನೆ, ಸಂತೆಕಟ್ಟೆ ರಾಮದಾಸ್ ನಾಯ್ಕ್ ಬುಕ್ಕಿಗುಡ್ಡೆ, ಲಲಿತಾಂಬ ಆನಂದ ಗೌಡ ಕುಕ್ಕುಂಜಾರು ಜೋಗಿ ಬೆಟ್ಟು, ರಾಮ ಕುಲಾಲ್ ಪಕ್ಕಾಲು, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್. ಶೆಟ್ಟಿ ವಡ್ಡಮೇಶ್ವರ, ವ್ಯವಸ್ಥಾಪನ ಸಮಿತಿಯ ತಾಂತ್ರಿಕ ಸಲಹೆಗಾರ ಸಂತೋಷ್ ಕುಲಾಲ್ ಪಕ್ಕಾಲು, ಕಾನೂನು ಸಲಹೆಗಾರ ವಿಶ್ವಾಸ ಶೆಟ್ಟಿ, ಕಚೇರಿ ಪ್ರಬಂಧಕ ಚನ್ನಕೇಶವ ಭಟ್, ನಿತ್ಯ ಸ್ವಾಗತ ಸಮಿತಿಯ ಅಧ್ಯಕ್ಷ ಸಂದೀಪ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.