ಬ್ರಹ್ಮಾವರ: ‘ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಸೌಲಭ್ಯಗಳೇ ಸಿಗುತ್ತಿಲ್ಲ ಅಥವಾ ಮಾಹಿತಿಯ ಕೊರತೆಯಿಂದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ರೋಟರಿ ಹಾಗೂ ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ’ ಎಂದು ರೋಟರಿ ವಲಯ 3ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಹೇಳಿದರು.
ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನಲ್ಲಿ ಗುರುವಾರ ಬ್ರಹ್ಮಾವರ ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಪೂರಕವಾಗಿ ‘ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್’ ರೂಪಿಸಿರುವ ಇ–ಪತ್ರಿಕೆ ಮಾಸ್ಟರ್ ಮೈಂಡ್ ಪ್ರಾತ್ಯಕ್ಷಿಕೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಕುಂದರ್ ಮಾತನಾಡಿ, ‘ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ರೋಟರಿ ಮೂಲಕ ‘ಪ್ರಜಾವಾಣಿ’ಯ ಇ–ಪೇಪರ್ ಬಡ ಆಸಕ್ತ ವಿದ್ಯಾಥಿಗಳಿಗೆ ನೀಡಲು ಸಂತೋಷವಾಗುತ್ತಿದೆ’ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್ಶೆಟ್ಟಿ ಮಾತನಾಡಿ, ‘ಇ–ಪತ್ರಿಕೆ ವಿದ್ಯಾರ್ಥಿಗಳ ಜ್ಞಾನ ಸಂಪಾದನೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಅಂಕಗಳಿಕೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ವ್ಯಾವಹಾರಿಕ ಜ್ಞಾನ, ಸಂವಹನ ಕಲೆಯನ್ನೂ ಮೈಗೂಡಿಸಿಕೊಂಡಲ್ಲಿ ಬೇಗನೇ ಉದ್ಯೋಗ ಪಡೆಬಹುದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅಗತ್ಯವಿದೆ’ ಎಂದು ಹೇಳಿದರು.
ಕಾಲೇಜಿನ ಎಚ್.ಆರ್.ಡಿ ಸೆಲ್ನ ಮುಖ್ಯಸ್ಥೆ ಟ್ವೀನಿ ಮರಿಯಾ ರೋಡ್ರಿಗಸ್, ‘ಪ್ರಜಾವಾಣಿ’ಯ ಪ್ರಸರಣ ವಿಭಾಗದ ಸಂತೋಷ್, ರೋಟರಿಯ ಆರೂರು ತಿಮ್ಮಪ್ಪ ಶೆಟ್ಟಿ, ರೆಕ್ಸಿನ್ ಮೋನಿಸ್, ರಘುನಾಥ, ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಮತ್ತು ಪದವಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕ್ರಾಸ್ಲ್ಯಾಂಡ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
‘ಪ್ರಜಾವಾಣಿ’ಯ ಪ್ರಸರಣ ವಿಭಾಗದ ಪ್ರಕಾಶ್ ನಾಯಕ್ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ‘ಮಾಸ್ಟರ್ ಮೈಂಡ್’ ಕುರಿತು ಸವಿವರವಾಗಿ ಮಾಹಿತಿ ನೀಡಿದರು.
ರೋಟರಿ ಅಧ್ಯಕ್ಷ ಹರೀಶ್ ಕುಂದರ್ ಸ್ವಾಗತಿಸಿದರು. ಬ್ರಹ್ಮಾವರ ವರದಿಗಾರ ಎ.ಶೇಷಗಿರಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.