ಸುಕುಮಾರ್ ಮುನಿಯಾಲ್
ಹೆಬ್ರಿ: ಭತ್ತದ ಬೇಸಾಯದ ಮಾಡುವುದೇ ಅಪರೂಪವಾಗಿರುವ ಈ ಕಾಲದಲ್ಲಿ ಪಡುಕುಡೂರು ಬೈಲು ಮಾತಿಬೆಟ್ಟಿನಲ್ಲಿ ಬೇಸಾಯ ಮಾಡಿದ್ದರೂ ನೀರಿನ ಸಮಸ್ಯೆಯಿಂದಾಗಿ ಭತ್ತ ಫಸಲು ಕೈಗೆ ಸಿಗದೆ ಅಪಾರ ನಷ್ಟವಾಗಿದೆ.
ತಾಲ್ಲೂಕಿನ ಮಾತಿಬೆಟ್ಟು ಪಡುಕುಡೂರುಬೈಲಿನಲ್ಲಿ 5ಕಿ.ಮೀ. ವ್ಯಾಪ್ತಿಯಲ್ಲಿ 50 ಎಕರೆ ಭತ್ತದ ಗದ್ದೆಯಲ್ಲಿ 15 ಕುಟುಂಬಗಳು ಪ್ರತಿವರ್ಷ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಕೆಲವರು ಗದ್ದೆ ಗೇಣಿಗೆ ಪಡೆದು ಬೇಸಾಯ ಮಾಡುತ್ತಾರೆ. ಆದರೆ ಈ ಸಲ ನೀರಿನ ಸಮಸ್ಯೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ.
ಕೃಷಿ ಇಲಾಖೆ ಸಾಂಪ್ರಾದಾಯಿಕವಾಗಿ ಕೃಷಿ ಮಾಡುವವರಿಗೆ ಸವಲತ್ತು, ನೀರಿನ ವ್ಯವಸ್ಥೆಗೆ ಅನುಕೂಲ ಕಲ್ಪಿಸಬೇಕು. ಪರಿಸರದಲ್ಲಿ ನೀರು ಲಭ್ಯವಿದ್ದರೆ ಕೃಷಿಕರಿಗೆ ಒದಗಿಸಲು ಯೋಜನೆ ರೂಪಿಸಬೇಕಿದೆ.
2 ಬೆಳೆ ಬೆಳೆಯುವ ಗದ್ದೆಗಳಿರುವ ಪಡುಕುಡೂರು ಬೈಲು ಮಾತಿಬೆಟ್ಟಿನಲ್ಲಿ ನೀರಿನ ಸಮಸ್ಯೆಯಿಂದಾಗಿಯೇ ಬೇಸಾಯ ಮಾಡಲು ಕಷ್ಟವಾಗಿದೆ. ಕಳೆ ತುಂಬಿರುವ ತೋಡಗಳ ಹೂಳೆತ್ತುವ ಕಾರ್ಯವನ್ನು ಮಾಡಿದರೂ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಪೆರ್ಮಾಣು ಅಣೆಕಟ್ಟಿನಿಂದ ನೀರು ಒದಗಿಸಿ ಮಾತಿಬೆಟ್ಟು ಸಮೀಪದ ಪೆರ್ಮಾಣಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು ನೀರಿನ ಸಂಗ್ರಹವಿದೆ. ವ್ಯವಸ್ಥಿತವಾದ ಚಾನಲ್ ಅಥವಾ ಪೈಪ್ ಲೈನ್ ಮೂಲಕ ಮಾತಿಬೆಟ್ಟು ಪಡುಕುಡೂರುಬೈಲು ಕೃಷಿ ಪ್ರದೇಶಕ್ಕೆ ನೀರು ಒದಗಿಸಿದರೆ ಅಪರೂಪದಲ್ಲಿ ಭತ್ತದ ಬೇಸಾಯ ಮಾಡುತ್ತಿರುವ ರೈತರಿಗೆ ಅನುಕೂಲವಾಗಲಿದೆ. ಕೃಷಿ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸುವಂತೆ ಮನವಿ ಮಾಡಿದ್ದಾರೆ. ಪಡುಕುಡೂರುಬೈಲು ಕೃಷಿ ಪ್ರದೇಶದ ರೈತರೊಂದಿಗೆ ಸಮಾಲೋಚನೆ ಮಾಡಿ ಯೋಜನೆ ರೂಪಿಸುವಂತೆ ರೈತೆ ಕಲ್ಯಾಣಿ ಪೂಜಾರಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.