ADVERTISEMENT

ರೈಲ್ವೆ ಮಂಡಳಿಯ ನಿರ್ಧಾರಕ್ಕೆ ಸಂತಸ

ಪಂಚ ಗಂಗಾವಳಿ ಅಭಿವೃದ್ಧಿ ಸಮಿತಿಯಿಂದ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:53 IST
Last Updated 4 ಜುಲೈ 2021, 7:53 IST
ಕುಂದಾಪುರ ಭಾಗದ ಮೀನುಗಾರ ಬಂಧುಗಳ ಜೀವನಾಡಿ 'ಪಂಚ ಗಂಗಾವಳಿ' ನದಿ.
ಕುಂದಾಪುರ ಭಾಗದ ಮೀನುಗಾರ ಬಂಧುಗಳ ಜೀವನಾಡಿ 'ಪಂಚ ಗಂಗಾವಳಿ' ನದಿ.   

ಕುಂದಾಪುರ: ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್ ರೈಲಿಗೆ ‘ಪಂಚ ಗಂಗಾ’ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡಿರುವ ರೈಲ್ವೆ ಮಂಡಳಿಗೆ ಪಂಚ ಗಂಗಾವಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಸಂಚಾಲಕ ಯು.ಎಸ್.ಶೆಣೈ ಕೃತಜ್ಞತೆ ತಿಳಿಸಿದ್ದಾರೆ.

ಈ ಭಾಗದ ಮೀನುಗಾರರ ಹಾಗೂ ಕೃಷಿಕರ ಜೀವನಾಡಿ ಪಂಚ ಗಂಗಾವಳಿ ನದಿಗಳ ಮಹತ್ವ ದೇಶಕ್ಕೆ ತಿಳಿಯುವಂತೆ ಮಾಡಿರುವ ಕ್ರಮ ಶ್ಲಾಘನೀಯ. ಉದ್ದೇಶಿತ ರೈಲಿಗೆ ‘ಪಂಚ ಗಂಗಾ’ ಹೆಸರು ಇಡುವುದಕ್ಕೆ
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ನಿರಂತರ ಹೋರಾಟ ನಡೆಸಿದ್ದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಮಲೆನಾಡು ಭಾಗದಿಂದ ಹರಿಯುವ ಸೌಪರ್ಣಿಕಾ, ಖೇಟ, ಚಕ್ರ , ಕುಬ್ಜ ಹಾಗೂ ವಾರಾಹಿ ನದಿಗಳು ಕುಂದಾಪುರ -ಗಂಗೊಳ್ಳಿ ನಡುವೆ ಸಂಗಮವಾಗಿ ಪಂಚ ಗಂಗಾವಳಿ
ಆಗಿ ಸಮುದ್ರದ ಕಡಲು ಸೇರುತ್ತವೆ ಎಂದು ತಿಳಿಸಿದ್ದಾರೆ.

ADVERTISEMENT

ಕೊಡಚಾದ್ರಿ ಬೆಟ್ಟಗಳ ಒಡಲು ಸೇರಿದಂತೆ ಎರಡು ಸಾವಿರ ಗಿಡಮೂಲಿಕೆಗಳ ಪ್ರಾಕೃತಿಕ
ಸಂಪತ್ತುಗಳ ನಡುವೆ ಹರಿದು ಬರುವ ಈ ನದಿಯ ಬಗ್ಗೆ ಬೇರೆ ಬೇರೆ ದೇಶಗಳ ಪಾಶ್ಚಾತ್ಯ ವಿದ್ವಾಂಸರು ಉಲ್ಲೇಖಿಸಿದ್ದಾರೆ. ರಾಜ್ಯದ ಇತಿಹಾಸ ಪುಟಗಳಲ್ಲಿ , ಪ್ರವಾಸೋದ್ಯಮ ಪುಸ್ತಕಗಳಲ್ಲಿ ಈ ಸಂಗತಿ ಉಲ್ಲೇಖ ಕೂಡ ಆಗಿವೆ.
2009 ರಿಂದ ಪಂಚ ಗಂಗಾವಳಿ ನದಿ ಮಹತ್ವವನ್ನು ತಿಳಿಸುವ ಹಾಗೂ ಈ ಪ್ರದೇಶಗಳ ಅಭಿವೃದ್ಧಿಯ
ಪ್ರಯತ್ನವನ್ನು ಪಂಚ ಗಂಗಾವಳಿ ಅಭಿವೃದ್ಧಿ ಸಮಿತಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ನದಿ ತಟದಲ್ಲಿನ ಹಲವಾರು ದೈವಸ್ಥಾನಗಳು ದೇಶ-ವಿದೇಶದಲ್ಲಿ ಪ್ರಸಿದ್ಧವಾಗಿವೆ. ಪಂಚ ಗಂಗಾವಳಿ ಅಭಿವೃದ್ಧಿ ಕುರಿತಂತೆ ಸಮಿತಿ ಸಲ್ಲಿಸಿರುವ ಅಭಿವೃದ್ಧಿ ಯೋಜನೆಗಳಿಗೆ ಈವರೆಗೆ ಸಕಾರಾತ್ಮಕ ಪ್ರಕ್ರಿಯೆಗಳು ನಡೆದಿಲ್ಲ. ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದ ಹಲವು
ಪ್ರಸ್ತಾವ ಇನ್ನೂ ಅನುಷ್ಠಾನಗೊಂಡಿಲ್ಲ ಎನ್ನುವ ಬೇಸರಗಳ ನಡುವೆಯೂ ಬೆಂಗಳೂರು-ಕಾರವಾರ ರೈಲಿಗೆ ’ಪಂಚ ಗಂಗಾ ಎಕ್ಸ್‌ಪ್ರೆಸ್‘ ನಾಮಕರಣ ಮಾಡಿರುವುದು ಕರಾವಳಿಗರಿಗೆ
ಖುಷಿ ತಂದಿದೆ ಎಂದು ಅವರು ತಿಳಿಸಿದ್ದಾರೆ.

‘ಅಭಿವೃದ್ಧಿಗೆ ಒತ್ತು ನೀಡಿ’

ಅವಿಭಜಿತ ಕುಂದಾಪುರ ತಾಲ್ಲೂಕಿನಲ್ಲಿ ಹರಿಯುವ 5 ನದಿಗಳು ಸಂಗಮ ತಾಣ ಪಂಚ ಗಂಗಾವಳಿ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕು. ಜತೆಗೆ ಪ್ರವಾಸೋದ್ಯಮ ಪ್ರದೇಶವಾಗಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ರಾಜಧಾನಿ ಬೆಂಗಳೂರಿನಿಂದ ಕರಾವಳಿ ಜಿಲ್ಲೆ ಸಂಪರ್ಕಿಸುವ ಪ್ರಮುಖ ರೈಲಿಗೆ ಪಂಚ ಗಂಗಾ ಎಂದು ಹೆಸರು ಬದಲಾಯಿಸಿರುವ ರೈಲ್ವೆ ಮಂಡಳಿ ನಿರ್ಧಾರ ಸಂತೋಷ ತಂದಿದೆ ಎಂದು ಪಂಚ ಗಂಗಾವಳಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.