
ಉಡುಪಿ: ಸ್ಮರಣ ಶಕ್ತಿಯಿಂದ ಗ್ರಹಿಸಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ವಿದ್ಯಾಭ್ಯಾಸವಲ್ಲ. ವಿಷಯವನ್ನು ಗ್ರಹಿಸಿದರ ಪರಿಣಾಮ ಚಿತ್ತದಲ್ಲಿ ಆಗಬೇಕು, ಆ ಮೂಲಕ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಆಗ ಮಾತ್ರ ವಿದ್ಯಾಭ್ಯಾಸ ಪೂರ್ಣರೂಪವನ್ನು ಪಡೆದಂತೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪರ್ಯಾಯ ಪೂಜಾ ಕಾರ್ಯ ಸಮಾಪನಗೊಳಿಸಿ ಸೀಮೋಲ್ಲಂಘನೆಗಾಗಿ ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಎನ್ಎಸ್ಎಸ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉನ್ನತ ಸಂಸ್ಥೆಗಳು ಕೆಲಸಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಕೇವಲ ಪ್ರತಿಭೆಯನ್ನಷ್ಟೆ ಗುರುತಿಸುವುದಿಲ್ಲ, ಅದಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಯಲ್ಲಿರುವ ಸೇವಾ ಮನೋಭಾವದ ಪರೀಕ್ಷೆ ನಡೆಸುತ್ತದೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ವಿ. ರಾವ್ ಉಭಯಶ್ರೀಗಳನ್ನು ಸ್ವಾಗತಿಸಿದರು.
ಎಸ್.ಎಂ.ಎಸ್.ಪಿ. ಸಭೆಯ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯರು ಗೌರವಿಸಿದರು. ಶ್ರೀನಿವಾಸ ತಂತ್ರಿ ಶ್ರೀಗಳನ್ನು ಸನ್ಮಾನಿಸಿದರು.
ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ನಿತಿನ್ ಭಟ್, ಶ್ರಿಕೃಷ್ಣ ಭಟ್, ಪ್ರಹ್ಲಾದ ಭಟ್, ನಾರಾಯಣ ರಾವ್ ವೇದಘೋಷ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.