ಉಡುಪಿ: ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡ ಬಳಿಕ ವೇದವರ್ಧನ ತೀರ್ಥ ಸ್ವಾಮೀಜಿ ಹಿರಿಯಡಕದಿಂದ ಉಡುಪಿಯ ಕೃಷ್ಣಮಠಕ್ಕೆ ಭೇಟಿನೀಡಿದರು.
ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಜತೆಯಾಗಿ ಬಂದ ವೇದವರ್ಧನ ಶ್ರೀಗಳಿಗೆ ಉಡುಪಿಯ ಸಂಸ್ಕೃತ ಕಾಲೇಜಿನ ಮಾರ್ಗವಾಗಿ ರಥಬೀದಿಗೆ ಸ್ವಾಗತ ಕೋರಲಾಯಿತು. ವೇದಮಂತ್ರ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ನೂತನ ಯತಿಗಳನ್ನು ಕರೆತರಲಾಯಿತು.
ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಉಭಯ ಯತಿಗಳು ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರನ ದೇಗುಲಕ್ಕೆ ತೆರಳಿ ದರ್ಶನ ಮಾಡಿದರು. ಬಳಿಕ ಕೃಷ್ಣಮಠದ ಎದುರು ವೇದವರ್ಧನ ಸ್ವಾಮೀಜಿಗೆ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉಡುಪಿ ಮಲ್ಲಿಗೆ ಮಾಲೆ ಸಹಿತಿ ಅರಳು ಸುರಿದು ಸಂಪ್ರದಾಯದಂತೆ ಸ್ವಾಗತ ಕೋರಿದರು.
ಬಳಿಕ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು. ಶೀರೂರು ಮಠದ ನೂತನ ಯತಿಗಳ ಹೆಸರಿನಂತೆ ಮಠದಲ್ಲಿ ವೇದೋತ್ಕರ್ಷವಾಗಲಿ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಹಾರೈಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.