ADVERTISEMENT

ನಮ್ಮೂರಿನ ರಾಮಮಂದಿರಕ್ಕೆ ದೇಣಿಗೆ ಕೊಟ್ಟರೆ ಆಗುವುದಿಲ್ಲವೇ: ಸಿದ್ದರಾಮಯ್ಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 10:33 IST
Last Updated 22 ಫೆಬ್ರುವರಿ 2021, 10:33 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಉಡುಪಿ: ಅಯೋಧ್ಯೆಯ ರಾಮನೂ ದಶರಥನ ಮಗನೇ, ನಮ್ಮೂರಿನ ರಾಮನೂ ದಶರಥನ ಮಗನೇ, ಹಾಗಾಗಿ, ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಡುವ ಬದಲು, ನಮ್ಮೂರಿನ ರಾಮಮಂದಿರಕ್ಕೆ ಕೊಡುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಡುಬಿದ್ರಿಯಲ್ಲಿ ಸೋಮವಾರ ನಡೆದ ಜನಧ್ವನಿ ಕಾಂಗ್ರೆಸ್ ಪಾದಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, 'ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಮಾತ್ರ ದೇಣಿಗೆ ಕೊಡಬೇಕೆ, ನಮ್ಮೂರಿನ ರಾಮಮಂದಿರಕ್ಕೆ ಕೊಟ್ಟರೆ ಆಗುವುದಿಲ್ಲವೇ' ಎಂದು ಪ್ರಶ್ನಿಸಿದರು.

'ನನ್ನ ಹೆಸರು ಸಿದ್ದರಾಮಯ್ಯ, ಹೆಸರಿನಲ್ಲೇ 'ರಾಮ' ಇದ್ದಾನೆ. ಮಹಾತ್ಮಾ ಗಾಂಧಿ ಕೂಡ ರಾಮನ ಭಕ್ತರು. ಕಾಂಗ್ರೆಸ್ ಗಾಂಧೀಜಿ ಹಿಂದುತ್ವ ಪಾಲನೆ ಮಾಡಿದರೆ, ಬಿಜೆಪಿ ಸಾವರ್ಕರ್ ಹಿಂದುತ್ವ ಪಾಲನೆ ಮಾಡುತ್ತದೆ. ಗಾಂಧಿ ಕೊಂದ ಗೋಡ್ಸೆ ಆರಾಧಕರು ನಿಜವಾದ ಹಿಂದುತ್ವವಾದಿಗಳೇ ಎಂದು ಸಿದ್ದರಾಮಯ್ಯ ಕುಟುಕಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚೆಕ್ ಮೂಲಕ ಲಂಚ ಸ್ವೀಕಾರ ಮಾಡಿದರೆ, ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. 'ನಾ ಖಾವೂಂಗ, ನಾ ಖಾನೆದೂಂಗ' ಎಂದರೆ ಇದೆಯೇ ನರೇಂದ್ರ ಮೋದಿ ಅವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

ಬಡವರು ಹೊಟ್ಟೆ ತುಂಬಾ ಊಟ ಮಾಡಲಿ ಎಂದು ಕಾಂಗ್ರೆಸ್ ಅವಧಿಯಲ್ಲಿ 7 ಕೆ.ಜಿ ಉಚಿತ ಅಕ್ಕಿ ನೀಡಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಕೂಡಲೇ 5 ಕೆಜಿಗೆ ಕಡಿತಗೊಳಿಸಿದರು. ಈಗ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಮತ್ತೆ 2 ಕೆ‌.ಜಿ ಕಡಿತಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಡೋಂಗಿ ರೈತನ ಮಗ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.