ADVERTISEMENT

ಸಾಮಾಜಿಕ ಅಂತರದ ಮಹತ್ವ ಅರಿತ ಜನರು

ಮೆಡಿಕಲ್‌, ಅಂಗಡಿಗಳ ಮುಂದೆ ಮಾರ್ಕಿಂಗ್‌ ಕಡ್ಡಾಯ: ಆದೇಶ ಉಲ್ಲಂಘಿಸಿದ ಅಂಗಡಿಗಳು ಬಂದ್‌; ಡಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:24 IST
Last Updated 26 ಮಾರ್ಚ್ 2020, 16:24 IST
ನಗರದ ರಿಲಾಯನ್ಸ್‌ ಮಳಿಗೆಗೆ ಖರೀದಿಗೆ ಬಂದಿದ್ದ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು.
ನಗರದ ರಿಲಾಯನ್ಸ್‌ ಮಳಿಗೆಗೆ ಖರೀದಿಗೆ ಬಂದಿದ್ದ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು.   

ಉಡುಪಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉಡುಪಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಆದೇಶ ನೀಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಒಮ್ಮೆಲೇ ಮುಗಿಬೀಳುತ್ತಿದ್ದು, ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ ಎಂದು ಡಿಸಿ ಸೂಚನೆ ನೀಡಿದ್ದಾರೆ.

ಮೆಡಿಕಲ್‌ ಶಾಪ್‌ಗಳು, ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳು, ಮೀನು, ಮಾಂಸ ಮಾರಾಟ ಕೇಂದ್ರಗಳು, ಹಣ್ಣಿನ ಅಂಗಡಿಗಳ ಮುಂಭಾಗದಲ್ಲಿ ಗ್ರಾಹಕರ ಮಧ್ಯೆ ಕನಿಷ್ಠ 6 ಅಡಿ ಅಂತರವಿರುವಂತೆ ಪೇಂಟ್‌ ಅಥವಾ ಬಣ್ಣಗಳಿಂದ ಮಾರ್ಕಿಂಗ್ ಮಾಡಬೇಕು. ಗ್ರಾಹಕರು ಮಾರ್ಕಿಂಗ್ ಸ್ಥಳದಲ್ಲಿಯೇ ನಿಂತು ಖರೀದಿ ಮಾಡಬೇಕು. ನಿಯಮ ಪಾಲಿಸದಿದ್ದರೆ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮೂಡಿದ ಸಾಮಾಜಿಕ ಅಂತರ ಜಾಗೃತಿ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣ ಪತ್ತೆಯಾಗುತ್ತಿದ್ದಂತೆಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಅಂಗಡಿಗಳ ಎದುರು ಮಾರ್ಕಿಂಗ್ ಮಾಡಿದ ಜಾಗದಲ್ಲಿಯೇ ನಿಂತು ಖರೀದಿ ಮಾಡುತ್ತಿದ್ದ ದೃಶ್ಯ ಗುರುವಾರ ಕಂಡುಬಂತು.

ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ರಿಲಯನ್ಸ್‌, ಬಿಗ್ ಬಜಾರ್ ಮಳಿಗೆಗಳಲ್ಲಿ ಗ್ರಾಹಕರು ನಿಲ್ಲಲು ಮಾರ್ಕಿಂಗ್ ಮಾಡಿದ್ದು ಕಂಡುಬಂತು. ಇಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಚಿತ್ತರಂಜನ್ ಸರ್ಕಲ್‌ನಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರದ ಮುಂದಿನ ರಸ್ತೆಗೆ ಮಾರ್ಕಿಂಗ್ ಮಾಡಲಾಗಿದ್ದು, ಗ್ರಾಹಕರು ಸರತಿಯಲ್ಲಿ ನಿಂತು ಔಷಧ ಖರೀದಿಸಿದರು.ರಾಧಾ ಮೆಡಿಕಲ್‌ ಶಾಪ್‌ನಲ್ಲಿಯೂ ಗ್ರಾಹಕರು ಅಂತರ ಕಾಯ್ದುಕೊಂಡು ಔಷಧ ಖರೀದಿಸಿದರು.

ಮಾಸ್ಕ್ ಧರಿಸುವವರ ಸಂಖ್ಯೆಯೂ ಹೆಚ್ಚಳ

ಬಹುತೇಕ ಮಂದಿ ಮಾಸ್ಕ್‌ ಧರಿಸಿಯೇ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಿದ್ದು, ಸೋಂಕು ಹರಡುವಿಕೆ ತಡೆಗೆ ಎಚ್ಚರ ವಹಿಸಿದ್ದಾರೆ. ಕೆಲವರು ಗ್ಲೌಸ್‌ ಧರಿಸಿ ಮಾರುಕಟ್ಟೆಗೆ ಬಂದಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.