ADVERTISEMENT

ಮೋಡದ ಮರೆಯಲ್ಲಿ ನೆರಳು ಬೆಳಕಿನಾಟ

ಕೃಷ್ಣಮಠದಲ್ಲಿ ಸೂರ್ಯ ಗ್ರಹಣದ ನಿಮಿತ್ತ ಜಪ ತಪ: ಸಂಜೆ ಮಹಾಪೂಜೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 13:25 IST
Last Updated 21 ಜೂನ್ 2020, 13:25 IST
ಉಡುಪಿಯಲ್ಲಿ ಭಾನುವಾರ ಗೋಚರಿಸಿದ ಸೂರ್ಯಗ್ರಹಣ
ಉಡುಪಿಯಲ್ಲಿ ಭಾನುವಾರ ಗೋಚರಿಸಿದ ಸೂರ್ಯಗ್ರಹಣ   

ಉಡುಪಿ: ದಟ್ಟ ಕಾರ್ಮೋಡ, ಮಳೆಯ ಸಿಂಚನ, ಮೋಡದ ಮರೆಯಲ್ಲಿ ಆಗಾಗ ಇಣುಕುತ್ತಿದ್ದ ಸೂರ್ಯನ ಕಣ್ಣಾಮುಚ್ಚಾಲೆ ಆಟದ ನಡುವೆಯೇ ಭಾನುವಾರ ಖಗೋಳ ಕೌತುಕ ಸೂರ್ಯಗ್ರಹಣ ಸಂಭವಿಸಿತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ. ಅಲ್ಲಲ್ಲಿ ಮಾತ್ರ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೊನಮರ್ಸ್‌ ಕ್ರಬ್‌ ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್‌ಗಳನ್ನು ಹಾಕಲಾಗಿತ್ತು. ಕನ್ನಡಕ ಹಾಗೂ ವೆಲ್ಡಿಂಗ್ ಗ್ಲಾಸ್‌ಗಳನ್ನು ಬಳಸಿ ಖಗೋಳಾಸಕ್ತರು ಗ್ರಹಣ ನೋಡಿದರು.

ಸಾರ್ವಜನಿಕರ ವೀಕ್ಷಣೆಗೆ ಪ್ರತ್ಯೇಕ ಟೆಲಿಸ್ಕೋಪ್ ವ್ಯವಸ್ಥೆ ಇತ್ತು. ಅಂತರ ಕಾಯ್ದುಕೊಂಡು ಗ್ರಹಣ ವೀಕ್ಷಿಸಿದರು. ಬೆಳಿಗ್ಗೆ 10.04ಕ್ಕೆ ಆರಂಭವಾದ ಗ್ರಹಣ, 1.22ಕ್ಕೆ ಅಂತ್ಯವಾಯಿತು. 11.27ಕ್ಕೆ ಗರಿಷ್ಠಮಟ್ಟದಲ್ಲಿ ಶೇ 40.38ರಷ್ಟು ಗ್ರಹಣ ಗೋಚರಿತು.

ADVERTISEMENT

ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುಕೊಂಡೇ ಗ್ರಹಣ ವೀಕ್ಷಿಸಲು ಪಿಪಿಸಿ ಕಾಲೇಜಿನ ಪ್ಯಾಕ್ ಸಂಸ್ಥೆಯು ಪಿಎಎಸಿ.ಪಿಪಿಸಿ.ಎಸಿ.ಇನ್‌ ವೆಬ್‌ಸೈಟ್ ಹಾಗೂ ಯೂಟ್ಯೂಬ್‌, ಫೇಸ್‌ಬುಕ್‌ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಿತ್ತು. 1,250ಕ್ಕೂ ಹೆಚ್ಚು ಮಂದಿ ಇಂಟರ್‌ನೆಟ್‌ನಲ್ಲಿ ವೀಕ್ಷಿಸಿದರು.

ಮೋಡಗಳ ಅಡ್ಡಿ:

ಆರಂಭದಲ್ಲಿ ವಾತಾವರಣ ತಿಳಿಯಾಗಿ ಗ್ರಹಣ ವೀಕ್ಷಣೆಗೆ ಸಹಕಾರಿಯಾದರೂ ನಂತರ ದಟ್ಟ ಮೋಡ ಆವರಿಸಿ ಅಡ್ಡಿಯಾಯಿತು. ಬಳಿಕ ಗ್ರಹಣ ಗರಿಷ್ಠಮಟ್ಟದಲ್ಲಿ ಗೋಚರಿಸುವ ಸಮಯಕ್ಕೆ ಸೂರ್ಯ ಮತ್ತೆ ಕಾಣಿಸಿಕೊಂಡಿದ್ದರಿಂದ ಗ್ರಹಣ ಸ್ವಷ್ಟವಾಗಿ ಗೋಚರಿಸಿತು. ಖಗೋಳಾಸಕ್ತರು ಹಾಗೂ ಸಾರ್ವಜನಿಕರು ಸಂತಸದಿಂದ ಆಕಾಶದ ಕೌತುಕವನ್ನು ವೀಕ್ಷಿಸಿದರು.

ಪ್ಯಾಕ್‌‌ ಸಂಸ್ಥೆಯ ಸಂಚಾಲಕ ಡಾ.ಎ.ಪಿ. ಭಟ್‌ ಹಾಗೂ ಅತುಲ್ ಭಟ್‌, ಕಾಲೇಜು ಪ್ರಾಂಶುಪಾಲ ಡಾ.ಎ. ರಾಘವೇಂದ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ.ಆಚಾರ್ಯ, ರಾಮದಾಸ್ ಪ್ರಭು, ಮಹಮ್ಮದ್ ಆಶಿಮ್‌ ಹಾಗೂ ಪಾಕ್‌ನ ಸದಸ್ಯರು ಇದ್ದರು.

ಪರ್ಕಳದಲ್ಲಿ ಗ್ರಹಣ ವೀಕ್ಷಣೆ:

ಪರ್ಕಳದ ಸ್ವಾಗತ್ ಹೋಟೆಲ್‌ ಬಳಿ ಗ್ರಹಣ ವೀಕ್ಷಣೆಗೆ ದೂರದರ್ಶಕ ಹಾಕಲಾಗಿತ್ತು. ಮಣಿಪಾಲದ ಮನೋಹರ್, ಸರಳೆಬೆಟ್ಟು ಸುಹಾಸ್ ಶೆಣೈ ಅವರ ಡಿಜಿಟಲ್ ಕ್ಯಾಮೆರಾದಲ್ಲಿ ಸಾರ್ವಜನಿಕರು ಗ್ರಹಣ ನೋಡಿದರು.

ಉದ್ಯಮಿ ಮೋಹನ್ ದಾಸ್ ನಾಯಕ್, ಜಯಶೆಟ್ಟಿ ಬನ್ನಂಜೆ, ಎಂ. ಗುರುರಾಜ್ ಶೆಟ್ಟಿ, ಶುಹಾಸ್ ಶೆಟ್ಟಿ, ವಾಲ್ಟರ್ ಡಿಸೋಜ, ಕರುಣಾಕರ್ ಪಾಟೀಲ್, ಸುಬ್ರಮಣ್ಯ ಪಾಟೀಲ್, ಸುಧೀರ್ ಶೆಟ್ಟಿ, ಪ್ರಕಾಶ್ ನಾಯ್ಕ್, ಸದಾನಂದ ಪೂಜಾರಿ,ದೇವಿಪ್ರಸಾದ್ ಆಚಾರ್ಯ ಗಣೇಶ್‌ರಾಜ್ ಸರಳೆಬೆಟ್ಟು ಇದ್ದರು. ರಾಜೇಶ್ ಪ್ರಭು ಪರ್ಕಳ ವೇಷಧರಿಸಿ ಜನಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.