ಬ್ರಹ್ಮಾವರ: ಈ ಬಾರಿ ಮುಂಗಾರು ಬೆಳೆ ಉತ್ತಮವಾಗಿ ಬಂದು ಉತ್ತಮ ಫಸಲು ರೈತರಿಗೆ ಲಭಿಸಿದೆಯಾದರೂ, ಕಟಾವು ಸಮಯದಲ್ಲಿ ನಿರಂತರ ಮಳೆಯಿಂದಾಗಿ ಹುಲ್ಲು ಮಾತ್ರ ರೈತರಿಗೆ ಸಿಗದೇ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ ಸುಗ್ಗಿ ಬೆಳೆ(ಭತ್ತ) ಬೆಳೆಯುವವರ ಸಂಖ್ಯೆ ಹೆಚ್ಚು ಕಂಡು ಬಂದಿದೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ರೈತರು ಮೊದಲ ಬೆಳೆಯ ನಂತರ ದ್ವಿದಳ ಧಾನ್ಯಗಳು ಮತ್ತು ಭತ್ತ ಬೆಳೆಯುವುದು ವಾಡಿಕೆ. ನೀರಿನ ಆಶ್ರಯವಿರುವ, ಅದರಲ್ಲೂ ಹೊಳೆಯ ಸಮೀಪವಿರುವ ಗದ್ದೆಗಳಲ್ಲಿ ಸುಗ್ಗಿ ಬೆಳೆಗೆ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಜ್ಯೋತಿ, ಎಂ.ಓ 21 ಜಯ ಮುಂತಾದ ತಳಿಗಳಲ್ಲದೇ ಸ್ಥಳೀಯ ಬೀಜಗಳನ್ನು ಬಳಸಿ ನಾಟಿ ಕಾರ್ಯ ಮಾಡುತ್ತಾರೆ. ಸುಗ್ಗಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯುವುದರೊಂದಿಗೆ ಖರ್ಚು ಕೂಡ ಹೆಚ್ಚು ಬರುತ್ತದೆಯಾದರೂ ರೈತರು ಈ ಬಾರಿ ಹೆಚ್ಚಿನ ಪ್ರದೇಶಗಳಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 4 ರಿಂದ 5ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಗ್ಗಿ ಭತ್ತ ನಾಟಿ ಕಾರ್ಯವಾಗುತ್ತಿದ್ದು, ಕಳೆದ ಮೂರ್ನಾಲ್ಕು ವರ್ಷಗಳ ಅಂಕಿ –ಅಂಶಗಳ ಪ್ರಕಾರ ಈ ಬಾರಿ ಅಂದಾಜು 1,000 ಹೆಕ್ಟೇರ್ ಹೆಚ್ಚಾಗಿದೆ.
ಉಡುಪಿ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕ ಸತೀಶ್ ಅವರ ಪ್ರಕಾರ, ಕಳೆದ ಬಾರಿ 34 ಕ್ವಿಂಟಲ್ ಜಯ ಮತ್ತು 147 ಕ್ವಿಂಟಲ್ ಜ್ಯೋತಿ ಬೀಜವನ್ನು ರೈತರು ಖರೀದಿಸಿದ್ದರೆ, ಈ ಬಾರಿ ಇದುವರೆಗೆ 35.75 ಕ್ವಿಂಟಲ್ ಜಯ ಮತ್ತು 179.50 ಕ್ವಿಂಟಲ್ ಜ್ಯೋತಿ ಬೀಜವನ್ನು ಬಿತ್ತನೆಗೆ ಖರೀದಿಸಿದ್ದಾರೆ. ಈ ಬಾರಿ ಮುಂಗಾರು ಮಳೆ ಡಿಸೆಂಬರ್ ಮೊದಲ ವಾರದವರೆಗೂ ಬಂದ ಕಾರಣ, ಕಟಾವು ಕಾರ್ಯ ವಿಳಂಬವಾಗಿ, ಸುಗ್ಗಿಯ ನಾಟಿ ಕಾರ್ಯ ಡಿಸೆಂಬರ್ ಅಂತ್ಯ ಅಥವಾ ಜನವರಿ ಮಧ್ಯದವರೆಗೂ ನಡೆಯಬಹುದು. ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 3,618 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಗ್ಗಿ ಭತ್ತದ ನಾಟಿ ಕಾರ್ಯವಾಗಿದ್ದು, ಈ ಬಾರಿ 4 ರಿಂದ 5 ಸಾವಿರ ಹೆಕ್ಟೇರ್
ಕೃಷಿ ಭೂಮಿಯಲ್ಲಿ ನಾಟಿ ಕಾರ್ಯವಾಗಲಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರೈತರ ಆಸಕ್ತಿ: ನೀಲಾವರ, ಬಾರ್ಕೂರು, ಕೊಕ್ಕರ್ಣೆ, ಆರೂರು, ಉಪ್ಪೂರು ಭಾಗದಲ್ಲಿ ಕಿಂಡಿ ಅಣೆಕಟ್ಟೆಯ ನೀರಿನ ಅವಲಂಬನೆ ಇರುವ ನದಿಯ ತೀರದಲ್ಲಿ ಈಗಾಗಲೇ ನಾಟಿ ಕಾರ್ಯಕ್ಕೆ ರೈತರು ಅಣಿಯಾಗಿ, ಕೆಲವೆಡೆ ನಾಟಿ ಕಾರ್ಯ ಆರಂಭಿಸಿದ್ದಾರೆ. ಕೆಲವೆಡೆ ತೋಡು ಹಳ್ಳಗಳ ನೀರು, ನದಿ ಪಾಲಾಗುವುದನ್ನು ತಪ್ಪಿಸಿ, ರೈತರೆ ಚಿಕ್ಕ ಕಟ್ಟುಗಳನ್ನು ಹಾಕಿ ನೀರನ್ನು ಹಿಡಿದಿಡುವ ಕಾರ್ಯ ಮಾಡಿದ್ದಾರೆ. ಬೆಳೆ ಮತ್ತು ಹುಲ್ಲಿಗಾಗಿ ಇತರರ ಗದ್ದೆಗಳನ್ನು ಗೇಣಿಗೆ ಪಡೆದು ನಾಟಿ ಕಾರ್ಯಕ್ಕೂ ಸಿದ್ಧತೆ ನಡೆಸಿದ್ದಾರೆ. ಜಾನುವಾರಿಗೆ ಮೇವಿನ ಅಗತ್ಯ ಇರುವುದರಿಂದ ಸುಗ್ಗಿಯತ್ತ ರೈತರು ಹೆಚ್ಚಿನ ಗಮನ ನೀಡಿದ್ದಾರೆ. ಇನ್ನು ಕೆಲವು ರೈತರು ಮೆಣಸು ಮತ್ತು ದ್ವಿದಳ ಧಾನ್ಯ ಬಿತ್ತನೆಗೂ ತಯಾರಿ ನಡೆಸಿದ್ದಾರೆ.
‘ಅಧಿಕ ಇಳುವರಿಯಿಂದ ಲಾಭ’
ಕರಾವಳಿಯಲ್ಲಿ ಹೆಚ್ಚಾಗಿ 90 ರಿಂದ 100 ದಿನದಲ್ಲಿ ಬೆಳೆಯುವ ಜ್ಯೋತಿಯನ್ನು ಸುಗ್ಗಿ ನಾಟಿ ಕಾರ್ಯಕ್ಕೆ ರೈತರು ಬಳಸಿಕೊಳ್ಳುತ್ತಿದ್ದಾರೆ. ಸುಗ್ಗಿ ಬೆಳೆಗೆ ಬಿಸಿಲು ಹೆಚ್ಚು ಬೀಳುವುದರಿಂದ ಇಳುವರಿಯೂ ಹೆಚ್ಚು ಪಡೆಯಬಹುದು. ಆದರೆ ಕೀಟ, ರೋಗ ಬಾಧೆಯೂ ಹೆಚ್ಚಿರುತ್ತದೆ. ನಿರ್ವಹಣಾ ವೆಚ್ಚವೂ ಹೆಚ್ಚಿರುತ್ತದೆ. ಆದರೂ ಅಧಿಕ ಇಳುವರಿಯಿಂದ ರೈತರು ಲಾಭ ಪಡೆಯುತ್ತಾರೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನವೀನ್.
ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಕ್ಕಿಂತ ಈ ಬಾರಿ ಬೀಜ ಖರೀದಿ ಹೆಚ್ಚಿದೆ. ನಾಟಿ ಕಾರ್ಯವೂ ಹೆಚ್ಚಾಗಿ, ಉತ್ಪಾದನೆಯೂ ಹೆಚ್ಚಿ, ರೈತರು ಅಧಿಕ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಸತೀಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.