ADVERTISEMENT

ನ್ಯಾಯದಾನ ಪ್ರಕ್ರಿಯೆ ಪ್ರತಿಯೊಬ್ಬರಿಗೂ ತಲುಪಲಿ: ನ್ಯಾ.ವಿಭು ಬಖ್ರು

ಗ್ರಾಮೀಣ ಸಮುದಾಯಗಳ ಸಬಲೀಕರಣ; ಕಾನೂನು ಅರಿವು–ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:44 IST
Last Updated 7 ಡಿಸೆಂಬರ್ 2025, 4:44 IST
ಕುಂದಾಪುರ ತಾಲ್ಲೂಕಿನ ಕೆರಾಡಿಯಲ್ಲಿ ಶನಿವಾರ ಗ್ರಾಮೀಣ ಸಮುದಾಯಗಳ ಸಬಲೀಕರಣ:ಹಕ್ಕುಗಳು ಮತ್ತು ಯೋಜನೆಗಳ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು
ಕುಂದಾಪುರ ತಾಲ್ಲೂಕಿನ ಕೆರಾಡಿಯಲ್ಲಿ ಶನಿವಾರ ಗ್ರಾಮೀಣ ಸಮುದಾಯಗಳ ಸಬಲೀಕರಣ:ಹಕ್ಕುಗಳು ಮತ್ತು ಯೋಜನೆಗಳ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು   

ಕುಂದಾಪುರ: ಸಮಾಜದ ತಳ ಹಂತದವರೆಗೂ ನ್ಯಾಯ ತಲುಪಿಸಲು ವಿದ್ಯಾರ್ಥಿಗಳು ಹಾಗೂ ಯುವಜನರು ಪಾತ್ರ ನಿರ್ಣಾಯಕ. ನ್ಯಾಯದಾನ ಪ್ರಕ್ರಿಯೆಗಳು ಸಮಾನ ಹಂತದಲ್ಲಿ ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆರಾಡಿ ಗ್ರಾಮದ ವರಸಿದ್ಧಿ ವಿನಾಯಕ ಕಾಲೇಜಿನಲ್ಲಿ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕುಂದಾಪುರ ವಕೀಲರ ಸಂಘ, ಕೆರಾಡಿ ಗ್ರಾಮ ಪಂಚಾಯಿತಿ, ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜು ಸಹಯೋಗದಲ್ಲಿ ಶನಿವಾರ ನಡೆದ ಗ್ರಾಮೀಣ ಸಮುದಾಯಗಳ ಸಬಲೀಕರಣ: ಹಕ್ಕುಗಳು ಮತ್ತು ಯೋಜನೆಗಳ ಕುರಿತು ಕಾನೂನು ಅರಿವು–ನೆರವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅದರ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಬೇಕು. ನಾಲ್ಕು ಗೋಡೆಗಳ ನಡುವೆ ನಡೆಯುವ ನ್ಯಾಯಾಂಗ ಪ್ರಕ್ರಿಯೆಗಳು ಸಮಾಜದ ಕೆಳಸ್ತರದವರೆಗೂ ತಲುಪಬೇಕು ಎನ್ನುವ ಆಶಯ ಫಲಪ್ರದವಾಗಬೇಕು. ನ್ಯಾಯದಾನ ಯಾರ ಕೊಡುಗೆಯೂ ಅಲ್ಲ, ಅದು ಪ್ರತಿಯೊಬ್ಬರ ಹಕ್ಕು ಎಂದರು.

ADVERTISEMENT

ಮಕ್ಕಳ ಪಂಚಾಯತ್ ಮೂಲಕ ಕೆರಾಡಿ ಗ್ರಾಮವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕೆರಾಡಿ ಮತ್ತು ಬೆಳ್ಳಾಲ ವ್ಯಾಪ್ತಿಯಲ್ಲಿ ಸರ್ವೇ ನಡೆಸಿದ ಕಾನೂನು ಸೇವೆಗಳ ಪ್ರಾಧಿಕಾರವು 3,700ಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಿದೆ. ಆಯುಷ್ಮಾನ್, ಆಧಾರ್, ಹಕ್ಕುಪತ್ರ, ಪಡಿತರ ಚೀಟಿ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಈ ವೇಳೆ ಜನರು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ. ಕೆರಾಡಿಯಿಂದ ಆರಂಭವಾದ ನ್ಯಾಯದಾಯಿಕ ಕಾರ್ಯಕ್ರಮ ರಾಜ್ಯದ ಪ್ರತಿ ಹಳ್ಳಿಗೂ ತಲುಪುವಂತಾಗಬೇಕು ಎಂದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಸಿವರಾಮನ್ ಮಾತನಾಡಿ, ನ್ಯಾಯ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಬೇಕು. ಇಲ್ಲಿ ತೆರೆಯಲಾದ ವಿವಿಧ ಇಲಾಖೆಗಳ ಮಳಿಗೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಂಡಾಗ ಮಾತ್ರ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳನ್ನು ಅರಿತು, ವ್ಯಾಜ್ಯ ಮುಕ್ತ ಗ್ರಾಮವಾಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಮುಗ್ದ ಜನರು ಕಾನೂನು ಸೇವೆಗಳ ಲಾಭ ಪಡೆಯುವಂತಾಗಬೇಕು ಎನ್ನುವ ಮಹತ್ವಾಕಾಂಕ್ಷೆಯ ಆಶಯ ಇದೆ ಎಂದರು.

ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ನನಗೆ ಮಾತ್ರ ಒಳ್ಳೆಯದಾಗಬೇಕು ಎನ್ನುವ ಮನೋಭಾವ ದೂರಾಗಬೇಕು. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅದನ್ನು ನೆರೆಹೊರೆಯವರಿಗೂ ತಲುಪಿಸಬೇಕು ಎಂದರು.

ಹೈಕೋರ್ಟ್‌ನ ರಿಜಿಸ್ಟ್ರಾರ್ ಕೆ.ಎಸ್.ಭರತ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಹಾಜರಿದ್ದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕಿರಣ್‌ ಎಸ್.ಗಂಗಣ್ಣವರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ.ವಂದಿಸಿದರು, ರಾಜೇಶ್ ಕೆ.ಸಿ,ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು. ವಡ್ಡರ್ಸೆ ಗ್ರಾಮ ಪಂಚಾಯಿತಿ ಪಿಡಿಒ ಸತೀಶ್ ವಡ್ಡರ್ಸೆ ಸಹಕರಿಸಿದರು.

ಭಾಗವತ ಸುರೇಶ್ ಶೆಟ್ಟಿ ಮತ್ತು ಬಳಗದಿಂದ ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯಿತು. ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿಯನ್ನು ನೀಡಲು ಮಳಿಗೆಗಳನ್ನು ತೆರೆಯಲಾಗಿತ್ತು. ಮೂವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರವನ್ನು ನೀಡಲಾಯಿತು. 

ಮಾಹಿತಿ ಮಳಿಗೆಯನ್ನು ನ್ಯಾಯಮೂರ್ತಿಗಳಾದ ವಿಭು ಬಖ್ರು ಅನು ಸಿವರಾಮನ್ ಉದ್ಘಾಟಿಸಿದರು