ಉಡುಪಿ: ಹಲವು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನಾಡ ದೋಣಿ ಮೀನುಗಾರರ ದುಡಿಮೆಗೆ ಹೊಡೆತ ಬಿದ್ದಿದೆ.
ಜುಲೈ ತಿಂಗಳ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಇದ್ದ ಕಾರಣ ಕೆಲ ದಿನಗಳ ಕಾಲ ಮಲ್ಪೆಯ ನಾಡ ದೋಣಿ ಮೀನುಗಾರರು ಮೀನುಗಾರಿಕೆ ನಡೆಸಿದ್ದರು. ಆದರೆ ಅನಂತರ ಹವಾಮಾನ ವೈಪರೀತ್ಯದಿಂದಾಗಿ ನಾಡ ದೋಣಿಗಳು ದಡ ಸೇರಿವೆ.
ಆರಂಭದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಡಿ ಸಿಕ್ಕಿತು. ಈಗಲೂ ಸಮುದ್ರಕ್ಕೆ ತೆರಳಿದರೆ ಸಿಗಡಿ ಸಿಗುತ್ತದೆ ಆದರೆ ತೆರಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರರು.
ಬೈಂದೂರು ವ್ಯಾಪ್ತಿಯ ನಾಡದೋಣಿ ಮೀನುಗಾರರು ಜುಲೈ ಮಧ್ಯ ಭಾಗದಿಂದ ಮೀನುಗಾರಿಕೆ ಶುರು ಮಾಡಿದ್ದು, ಅವರಿಗೆ ಆರಂಭದಿಂದಲೇ ಹೊಡೆತ ಬಿದ್ದಿದೆ.
ಕಳೆದ ವರ್ಷ ಕೂಡ ಜುಲೈ ತಿಂಗಳಲ್ಲಿ ಪದೇ ಪದೇ ಚಂಡಮಾರುತ ರೂಪಗೊಂಡ ಪರಿಣಾಮವಾಗಿ ನಾಡ ದೋಣಿಗಳು ಕಡಲಿಗಿಳಿಯದೆ ಮೀನುಗಾರರಿಗೆ ನಷ್ಟ ಉಂಟಾಗಿತ್ತು.
‘ಈ ಬಾರಿ ಉತ್ತಮ ಮೀನುಗಾರಿಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ದುಡಿಮೆ ಇಲ್ಲದಂತಾಗಿದೆ. ಟ್ರಾಲಿಂಗ್ ನಿಷೇಧ ತೆರವಾಗಲು ಇನ್ನು ಕೆಲವೇ ದಿನಗಳಿದ್ದು, ನಿರಂತರ ಮಳೆಯಿಂದಾಗಿ ಸಮುದ್ರಕ್ಕಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮಲ್ಪೆಯ ನಾಡದೋಣಿ ಮೀನುಗಾರ ರತನ್ ತಿಳಿಸಿದರು.
‘ಸಮುದ್ರದಲ್ಲಿ ಆಗಾಗ ತೂಫಾನ್ ಎದ್ದ ಪರಿಣಾಮವಾಗಿ ಕಡಲಿನ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಈ ಕಾರಣಕ್ಕೆ ಅಳಿವೆ ಮುಖಾಂತರ ಕಡಲಿಗೆ ಮೀನುಗಾರಿಕೆಯ ತೆರಳಲು ಭಯವಾಗುತ್ತಿದೆ’ ಎಂದೂ ಅವರು ಹೇಳಿದರು.
‘ದುಬಾರಿಯಾಗಿದೆ ಸೀಮೆಎಣ್ಣೆ’
‘ಹೆಚ್ಚಿನ ನಾಡ ದೋಣಿಗಳಲ್ಲಿ ಸೀಮೆಎಣ್ಣೆ ಬಳಸುತ್ತಿದ್ದು ಕಳೆದ ವರ್ಷ ಲೀಟರ್ಗೆ ₹35 ಇದ್ದ ಸೀಮೆಎಣ್ಣೆಗೆ ಈ ಬಾರಿ ಲೀಟರ್ಗೆ ₹ 65 ಆಗಿದೆ. ಸೀಮೆಎಣ್ಣೆ ದರ ಲೀಟರ್ ₹100 ಇದ್ದು ಸಹಾಯಧನ ಕಳೆದು ಲೀಟರ್ಗೆ ₹65 ಪಾವತಿಸಬೇಕಾಗುತ್ತದೆ’ ಎಂದು ಮಲ್ಪೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್ ಸಾಲ್ಯಾನ್ ತಿಳಿಸಿದರು. ‘ಮೀನುಗಾರಿಕೆಗೆ ತೆರಳಿ ಮೀನು ಸಿಗದಿದ್ದರೆ ಸೀಮೆ ಎಣ್ಣೆಗೆ ಖರ್ಚು ಮಾಡಿದ ಹಣ ನಷ್ಟವಾಗುತ್ತದೆ. ಈ ಬಾರಿ ಮಲ್ಪೆ ನಾಡ ದೋಣಿ ಮೀನುಗಾರರಿಗೆ ಕೇವಲ 10 ದಿವಸ ಮಾತ್ರ ಮೀನುಗಾರಿಗೆ ನಡೆಸಲು ಸಾಧ್ಯವಾಗಿತ್ತು. ನಂತರ ಕಡಲಿನಲ್ಲಿ ತೂಫಾನ್ ಎದ್ದ ಕಾರಣ ಕಡಲಿಗಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.