ADVERTISEMENT

ಉಡುಪಿ: ಇಬ್ಬರು ಕೊರೊನಾ ವಾರಿಯರ್ಸ್ ಸೇರಿ 22 ಮಂದಿಗೆ ಸೋಂಕು

658 ಮಂದಿ ಸೋಂಕಿನಿಂದ ಗುಣಮುಖ; ಮತ್ತೆ ಮುಂಬೈ ಆತಂಕ ಶುರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:54 IST
Last Updated 11 ಜೂನ್ 2020, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಇಬ್ಬರು ಕೊರೊನಾ ವಾರಿಯರ್ಸ್‌ ಸೇರಿ 22 ಮಂದಿಯಲ್ಲಿ ಗುರುವಾರ ಕೋವಿಡ್‌–19 ಸೋಂಕು ದೃಢಪಟ್ಟಿದೆ.

20 ಮಂದಿಗೆ ಮುಂಬೈ ಸಂಪರ್ಕವಿದ್ದು, ಒಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ ಮತ್ತೊಬ್ಬರು ಗ್ರೂಪ್‌ ‘ಡಿ’ ನೌಕರರಾಗಿದ್ದಾರೆ. ಸೋಂಕಿತರಲ್ಲಿ 11 ಪುರುಷರು, 9 ಮಹಿಳೆಯರು, ಇಬ್ಬರು ಮಕ್ಕಳಿದ್ದಾರೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

658 ಮಂದಿ ಗುಣಮುಖ:

ADVERTISEMENT

ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಗುಣಮುಖರಾದ 552 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಗುರುವಾರ 106 ಜನರ ವೈದ್ಯಕೀಯ ಪರೀಕ್ಷೆ ನೆಗೆಟಿವ್ ಬಂದಿದ್ದು ಗುರುವಾರ ಹಾಗೂ ಶುಕ್ರವಾರ ಡಿಸ್‌ಚಾರ್ಜ್‌ ಮಾಡಲಾಗುವುದು. ಸದ್ಯ ಜಿಲ್ಲೆಯಲ್ಲಿ 308 ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಮಾಹಿತಿ ನೀಡಿದರು.

2 ದಿನ ಒಂದೂ ಪ್ರಕರಣ ಇರಲಿಲ್ಲ:

ಮಂಗಳವಾರ, ಬುಧವಾರ ಜಿಲ್ಲೆಯಲ್ಲಿ ಒಂದೂ ಕೋವಿಡ್‌ ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ. ಗುರುವಾರ ಮತ್ತೆ 22 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 969ಕ್ಕೇರಿಕೆಯಾಗಿದೆ.

ಮತ್ತೆ ‘ಮುಂಬೈ’ ಆತಂಕ:‌

ಜಿಲ್ಲೆಗೆ ಮತ್ತೆ ಮುಂಬೈ ಆತಂಕ ಕಾಡುತ್ತಿದೆ. ಸಾವಿರಾರು ಮಂದಿ ಈಗಾಗಲೇ ಜಿಲ್ಲೆಗೆ ಬರಲು ಸೇವಾಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿದ್ದು, ಹಂತ ಹಂತವಾಗಿ ಜಿಲ್ಲೆಗೆ ಬರಲಿದ್ದಾರೆ. ಬಂದವರಿಗೆಲ್ಲ ಜಿಲ್ಲಾಡಳಿತ 14 ದಿನಗಳ ಹೋಂ ಕ್ವಾರಂಟೈನ್‌ ಮಾಡಿ ಮನೆಯನ್ನು ಸೀಲ್‌ಡೌನ್ ಮಾಡಲಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದವರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳುವ ಸವಾಲು ಜಿಲ್ಲಾಡಳಿತದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.