ಉಡುಪಿ: ಶಿರ್ವ ವ್ಯಾಪ್ತಿಯ ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಸಮೀಪದ ಕುದ್ರುಮಲೆ ಎಂಬಲ್ಲಿ ಸ್ಥಾಪಿಸಿದ್ದ ಶಿಲುಬೆಯನ್ನು ದುಷ್ಕರ್ಮಿಗಳು ದ್ವಂಸಗೊಳಿಸಿದ್ದಾರೆ.
ಖಾಸಗಿ ಜಾಗದಲ್ಲಿರುವ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು 30 ವರ್ಷಗಳಿಂದ ಆರಾಧಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಪಟ್ಟಾ ಜಾಗದಲ್ಲಿದ್ದ ಶಿಲುಬೆಯನ್ನು ದುಷ್ಕರ್ಮಿಗಳು ಮುರಿದು ಹಾಕಿದ್ದಾರೆ. ಸ್ಥಳೀಯರ ದೂರಿನ ಅನ್ವಯ
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲುಬೆಯು ಗುಡ್ಡದ ಮೇಲೆ ಇದ್ದು ಅಲ್ಲಿ ಯಾವುದೇ ಮನೆಗಳಿಲ್ಲ. 15 ದಿವಸಗಳ ಹಿಂದೆ ಶಿಲುಬೆ ಸರಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
‘ಸ್ಥಳೀಯರಿಂದ ಮಾಹಿತಿ ಪಡೆದು ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆ ಮಾಡಲಾಗುವುದು’ ಎಂದೂ ಅವರು ಹೇಳಿದ್ದಾರೆ.
‘ವಲೇರಿಯನ್ ಲೋಬೋ ಎಂಬುವವರು ಸ್ವಂತ ಜಾಗದಲ್ಲಿ ಈ ಶಿಲುಬೆ ನಿರ್ಮಿಸಿದ್ದರು. ಪ್ರತಿ ವರ್ಷ ಉಪವಾಸ ದಿನಗಳಲ್ಲಿ ಸುಮಾರು 30 ಕುಟುಂಬಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಶಿಲುಬೆಯನ್ನು ಧ್ವಂಸ ಮಾಡಿ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು’ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.