ಸಾಂದರ್ಭಿಕ ಚಿತ್ರ
ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆಯ ಡಿಎನ್ಎ ಪರೀಕ್ಷೆ ಮಂಗಳವಾರ ನಡೆಯಿತು.
ಆರೋಪಿಯ ಡಿಎನ್ಎ ಪರೀಕ್ಷೆಗೆ ಪೊಲೀಸರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅನುಮತಿ ನೀಡಿತ್ತು. ವೈದ್ಯಾಧಿಕಾರಿಗಳು ಆರೋಪಿ ಪ್ರವೀಣ್ ಚೌಗಲೆಯ ರಕ್ತದ ಮಾದರಿಯನ್ನು ಪಡೆದುಕೊಂಡರು.
‘ಕೊಲೆ ಮಾಡಿದ ಬಳಿಕ ಮೂಲ್ಕಿಯ ಬಪ್ಪನಾಡು ಸಮೀಪದ ಪಾಳು ಮನೆಯೊಂದರಲ್ಲಿ ರಕ್ತಸಿಕ್ತ ಬಟ್ಟೆಗಳನ್ನು ಸುಟ್ಟಿಹಾಕಿದ್ದು, ಸೋಮವಾರ ಪೊಲೀಸರು ಸ್ಥಳ ಮಹಜರು ನಡೆಸಿ ಸುಟ್ಟ ಬಟ್ಟೆಯ ಕುರುಕುಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಪೊಲೀಸರು ನ.22ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
‘ಮಂಗಳೂರಿನ ಬಿಜೈನಲ್ಲಿ ಮೃತ ಯುವತಿ ವಾಸವಿದ್ದ ಕೊಠಡಿಯ ಸಮೀಪ ಆರೋಪಿ ಪ್ರವೀಣ್ ಚೌಗಲೆಗೆ ಸೇರಿದ ಸ್ಕೂಟರ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಆರೋಪಿ ಹೊಸ ಕಾರು ಖರೀದಿಸಿದ ಬಳಿಕ ಸ್ಕೂಟರ್ ಅನ್ನು ಸಹೋದ್ಯೋಗಿ ಯುವತಿಗೆ ಮಾರಾಟ ಮಾಡಿರುವ ಸಾಧ್ಯತೆ ಇದೆ’ ಎಂಬುದು ಪೊಲೀಸ್ ಮೂಲಗಳ ಮಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.