ತೊಟ್ಟಂ ಸಂತ ಅನ್ನಮ್ಮ ಚರ್ಚ್ನಲ್ಲಿ ಭಾನುವಾರ ಸಾವಯವ ತರಕಾರಿ ಸಂತೆ ಆಯೋಜಿಸಲಾಗಿತ್ತು.
ಉಡುಪಿ: ಕ್ರೈಸ್ತ ಬಾಂಧವರ ತೆನೆ ಹಬ್ಬ ಮೊಂತಿ ಫೆಸ್ತ್ ಪ್ರಯುಕ್ತ ಸ್ಥಳೀಯ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ಚರ್ಚ್ನಲ್ಲಿ ಭಾನುವಾರ ಸಾವಯವ ತರಕಾರಿ ಸಂತೆ ಆಯೋಜಿಸಲಾಗಿತ್ತು.
ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು ಸಾವಯವ ಗೊಬ್ಬರ ಬಳಸಿ ಬೆಳೆದ ತರಕಾರಿಗಳನ್ನು ಮಾರಾಟಕ್ಕಿಟ್ಟಿದ್ದರು.
ವೇಳೆ ಮಾತನಾಡಿದ ಚರ್ಚ್ನ ಧರ್ಮಗುರು ಡೆನಿಸ್ ಡೆಸಾ, ತರಕಾರಿಯನ್ನು ಬೆಳೆದವರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಉತ್ತಮ ಬೆಲೆ ಲಭಿಸಬೇಕೆಂಬ ಸದುದ್ದೇಶದಿಂದ ಆಯೋಜಿಸಿರುವ ತರಕಾರಿ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಹಬ್ಬದ ಆಚರಣೆಗಳು ಸರ್ವಧರ್ಮದ ಸಹಭಾಗಿತ್ವದೊಂದಿಗೆ ನಡೆದಾಗ ಸೌಹಾರ್ದಯುತ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದೂ ಅವರು ಹೇಳಿದರು.
ತೊಟ್ಟಂ ದೇವಾಲಯದ ಶ್ರೀ ಸಾಮಾನ್ಯರ ಆಯೋಗ, ಕಥೊಲಿಕ್ ಸಭಾ ಸಂಘಟನೆ ವತಿಯಿಂದ ತರಕಾರಿ ಸಂತೆ ಆಯೋಜಿಸಲಾಗಿತ್ತು. ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿ ಕೂಡ ಕೈಜೋಡಿಸಿತ್ತು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ ಕಥೊಲಿಕ್ ಸಭಾ ಅಧ್ಯಕ್ಷ ವೀಣಾ ಫೆರ್ನಾಂಡಿಸ್, ಸರ್ವ ಧರ್ಮಸಮನ್ವಯ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ರಾಮಪ್ಪ ಸಾಲಿಯಾನ್, ಶಬೀರ್ ಸಾಹೇಬ್, ಸೀರಾಝ್ ಮಲ್ಪೆ ಉಪಸ್ಥಿತರಿದ್ದರು. ಲವೀನಾ ಫೆರ್ನಾಂಡಿಸ್ ಸ್ವಾಗತಿಸಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ವ್ಯಾಪಾರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಬೃಹತ್ ಸಾವಯವ ತರಕಾರಿ ಸಂತೆಯನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ ರಾಮಪ್ಪ ಸಾಲಿಯಾನ್ ಸರ್ವ ಧರ್ಮ ಸಮನ್ವಯ ಸಮಿತಿ ಪದಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.