ಉಡುಪಿ: ಸೆ.11ರಂದು ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ಕೃಷ್ಣಮಠದ ರಥಬೀದಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ತಡೆಯಲು ಜಿಲ್ಲಾಡಳಿತದ ಸೂಚನೆಯಂತೆ ಅಂದು ಮಧ್ಯಾಹ್ನ 12.30ರಿಂದ ಸಂಜೆ 5.30ರವರೆಗೆ ಭಕ್ತರಿಗೆ ರಥಬೀದಿ ಪ್ರವೇಶಕ್ಕೆ ನಿರ್ಬಂಧವಿದೆ. ಲೀಲೋತ್ಸವ ಮುಗಿದ ಬಳಿಕ ಕನಕನ ಕಿಂಡಿಯ ಮೂಲಕ ಭಕ್ತರು ದೇವರ ದರ್ಶನ ಪಡೆಯಬಹುದು.
ಲಕ್ಷ ಚಕ್ಕುಲಿ, ಉಂಡೆ ತಯಾರಿ:ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಇಲ್ಲದ್ದರಿಂದ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳ ಆಶಯದಂತೆ ಎಲ್ಲ ಭಕ್ತರಿಗೆ ಕೃಷ್ಣ ಪ್ರಸಾದ ಸಿಗಬೇಕು ಎಂಬ ಉದ್ದೇಶದಿಂದ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಕೃಷ್ಣನ ಚಿಂತನೆಗಳ ಸ್ಮರಿಸೋಣ’
ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಕೃಷ್ಣನ ವಿಶೇಷ ಚಿಂತನೆಗಳಿಗೆ ಸಮಯ ಮೀಸಲಿಡಬೇಕು. ಕೃಷ್ಣ ಜನ್ಮಾಷ್ಟಮಿಯ ದಿನ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತೇವೆ. ಇಂತಹ ಕಾರ್ಯಗಳು ಭಗವಂತನ ಬಗ್ಗೆ ಸದಾ ಚಿಂತನ ನಡೆಸಲು ಸಹಕಾರಿ. ಮಕ್ಕಳಿಗೂ ಸಂಸ್ಕಾರ ಸಿಗುತ್ತದೆ. ಕೃಷ್ಣ ಲೋಕಕ್ಕೆ ಪಾಠ ಹೇಳಲು ಬಂದವರು. ಕಾಲೀಯ ಮದನ ಮಾಡುವ ಮೂಲಕ ಕೃಷ್ಣ ನೃತ್ಯಕ್ಕೆ ಗುರುವಾದ. ಕೃಷ್ಣನನ್ನು ಸದಾ ನಮ್ಮ ತಲೆಯ ಮೇಲಿಟ್ಟುಕೊಳ್ಳೋಣ. ಕೃಷ್ಣನನ್ನು ಅನುಸಂಧಾನ ಮಾಡುವ ಮೂಲಕ ಸಂಭ್ರಮಿಸೋಣ. ವೈರಾಗ್ಯ ಹಾಗೂ ಭಕ್ತಿಯ ಸಂಕೇತರಾದ ವಸುದೇವ ಹಾಗೂ ದೇವಕಿಯಾಗಿ ಬಾಳೋಣ' ಎಂದುಪರ್ಯಾಯ ಅದಮಾರು ಮಠ ಈಶಪ್ರಿಯ ತೀರ್ಥ ಸ್ವಾಮೀಜಿ ಸಂದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.