
ಉಡುಪಿ: ‘ಜಿಲ್ಲೆಯಲ್ಲಿ ನಿವೇಶನ ರಹಿತ ಬಡವರು ನೂರಾರು ವರ್ಷಗಳಿಂದ ನೋವಿನ ಬದುಕು ಸಾಗಿಸುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳು ಈಗ ಕಂಬಳಕ್ಕಾಗಿ ಭೂಮಿಗೆ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡು ಹಾಗೂ ವಿಷಾದದ ವಿಚಾರ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
‘ಕಂಬಳ ಎನ್ನುವುದು ಕೆಲವೊಂದು ಕುಟುಂಬಗಳ ಸ್ವಂತ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮವಲ್ಲ. ತಮ್ಮ ಸ್ವಪ್ರತಿಷ್ಠೆಯ ಪ್ರದರ್ಶನದ ಪ್ರತೀಕವಾದ ಕಂಬಳಕ್ಕೆ ಈಗ ಜಿಲ್ಲಾಡಳಿತದ ಶಿರೋನಾಮೆ ಕೊಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡುವ ವ್ಯವಸ್ಥಿತ ಸಂಚು ಇದು. ಕಂಬಳಕ್ಕೆ ಜಾಗ ಕಾಯ್ದಿರಿಸಿ, ಆಮೇಲೆ ರೆಸಾರ್ಟ್ ತೆರೆಯುವ ಹುನ್ನಾರವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕೋಣಗಳನ್ನು ಓಡಿಸಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಆಗುವ ಪ್ರಯೋಜನವಾದರೂ ಏನು? ಕಂಬಳಕ್ಕೆ 6.30 ಎಕರೆ ಭೂಮಿ ಕಾಯ್ದಿರಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಬಬ್ಬುಸ್ವಾಮಿ ದೈವಸ್ಥಾನಗಳಿಗೆ ಕೋಲ, ನೇಮೋತ್ಸವ ನಡೆಸಲು ಒಂದೊಂದು ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಈಗ ಶಂಕುಸ್ಥಾಪನೆ ನಡೆಸಿದ ಜನಪ್ರತಿನಿಧಿಗಳು ಹೋರಾಟ ನಡೆಸುತ್ತಾರೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಮುಂದೊಂದು ದಿನ ಜೂಜಾಟ ಆಡುವ ಕೋಳಿ ಅಂಕಕ್ಕೂ ನಿವೇಶನ ಕೊಡಬೇಕೆಂದು ಜನಪ್ರತಿನಿಧಿಗಳು ಬೇಡಿಕೆ ಇಟ್ಟು ಒತ್ತಾಯಿಸಿದರೆ ಅದಕ್ಕೂ ಜಿಲ್ಲಾಡಳಿತ ಮಣೆ ಹಾಕುತ್ತದೆಯೇ?’ ಎಂದಿದ್ದಾರೆ.
‘80 ಬಡಗುಬೆಟ್ಟು ಗ್ರಾಮದ ಸರ್ವೆ ನಂಬರ್ 11/1ರಲ್ಲಿ 6.30 ಎಕರೆ ಭೂಮಿಯನ್ನು ಕಂಬಳಕ್ಕಾಗಿ ಕಾಯ್ದಿರಿಸಿದ್ದು ಜನವಿರೋಧಿ ನೀತಿ. ಲಕ್ಷಾಂತರ ಬಡವರು ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನವಿಲ್ಲದೇ ಕಣ್ಣೀರಿನ ಜೀವನ ನಡೆಸುತ್ತಿರುವಾಗ ಮೋಜು ಮಸ್ತಿಗಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸಿರುವುದು ಅಕ್ಷಮ್ಯ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಉಡುಪಿ ಕಂಬಳದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಾಮುಂದು ತಾಮುಂದು ಎಂದು ಭೂಮಿ ಪೂಜೆಗೆ ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ. ಬಡವರು ಭೂಮಿಗಾಗಿ ಅರ್ಜಿ ಹಾಕಿದಾಗ ಸರ್ಕಾರಿ ಭೂಮಿ ಲಭ್ಯವಿಲ್ಲ ಎಂದು ಹೇಳುವ ಜಿಲ್ಲಾಡಳಿತ ಈಗ ಯಾರನ್ನೋ ಸಂತೈಸಲು ಸರ್ಕಾರಿ ಭೂಮಿ ಕಾಯ್ದಿರಿಸಿರುವುದು ಬಡವರ ವಿರೋಧಿ ನಡೆಯಾಗಿದೆ’ ಎಂದಿದ್ದಾರೆ.
‘ಜಿಲ್ಲಾಡಳಿತ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಬದಲು ಬಡವರಿಗೆ ಬದುಕಲು ನಿವೇಶನ ಮಂಜೂರು ಮಾಡಿ ಜನರ ಅಭಿವೃದ್ಧಿ ಕೆಲಸ ಮಾಡುವುದು ಅತ್ಯಂತ ಜರೂರಿನ ಆದ್ಯತೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.