
ಉಡುಪಿ: ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಮೀನುಗಾರಿಕೆಯು ಪ್ರಮುಖ ಆರ್ಥಿಕ ಚಟುವಟಿಕೆಯಾಗಿದ್ದು, ಸಾವಿರಾರು ಕುಟುಂಬಗಳ ಜೀವನೋಪಾಯ ಮಾರ್ಗವೂ ಹೌದು.
ಮಳೆಗಾಲದ ಆರಂಭದಲ್ಲಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುವುದರಿಂದ ಯಾಂತ್ರೀಕೃತ ದೋಣಿಗಳು ದಡಸೇರುತ್ತವೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಯುತ್ತದೆ. ಪ್ರತಿ ಮಳೆಗಾಲದಲ್ಲೂ ದೋಣಿ ದುರಂತಗಳು ಸಂಭವಿಸಿ ಮೀನುಗಾರರು ಪ್ರಾಣ ಕಳೆದುಕೊಳ್ಳುವ ಘಟನೆಗಳು ಸಂಭವಿಸುತ್ತವೆ.
ಅಳಿವೆ ಬಾಗಿಲಿನಲ್ಲಿ, ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳು ಮಗುಚಿದಾಗ ಅದರಲ್ಲಿರುವ ಮೀನುಗಾರರನ್ನು ತುರ್ತಾಗಿ ರಕ್ಷಣೆ ಮಾಡುವ ವ್ಯವಸ್ಥೆ ಇಲ್ಲ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ.
ಜಿಲ್ಲೆಗೆ ಬೋಟ್ ಆಂಬುಲೆನ್ಸ್ ಬೇಕೆಂಬ ಬೇಡಿಕೆಯನ್ನು ಮೀನುಗಾರರು ಈ ಹಿಂದೆಯೇ ಮುಂದಿಟ್ಟಿದ್ದರು. ಆದರೆ ಅದು ಈಡೇರಿಲ್ಲ. ಏರ್ ಆಂಬುಲೆನ್ಸ್ ಸೇವೆ ಆರಂಭಿಸುವುದಾಗಿ ಈ ಹಿಂದೆ ಘೋಷಿಸಿದ್ದರೂ ಜಿಲ್ಲೆಯಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಮೀನುಗಾರರು.
ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧವಾಗಿರುವ ಸಂದರ್ಭದಲ್ಲಿ ದೋಣಿ ದುರಂತವಾದರೆ. ತಕ್ಷಣ ಸ್ಥಳೀಯ ಮೀನುಗಾರರೇ ರಕ್ಷಣಾ ಕಾರ್ಯಾಚರಣೆ ಆರಂಭಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ತೀರವಾಸಿಗಳು.
ದೋಣಿ ದುರಂತಗಳ ಸಂದರ್ಭಗಳಲ್ಲಿ ತಕ್ಷಣ ಕಾರ್ಯಾಚರಣೆಗೆ ಅಗತ್ಯವಾದ ಸ್ಫೀಡ್ ಬೋಟ್ ಸೇವೆ, ಬೋಟ್ ಆಂಬುಲೆನ್ಸ್ ಸೇರಿದಂತೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಮಲ್ಪೆಯಲ್ಲಿರುವ ಸರ್ವ ಋತು ಮೀನುಗಾರಿಕಾ ಬಂದರು ಸಾವಿರಾರು ಕಾರ್ಮಿಕರ ಅನ್ನದ ಬಟ್ಟಲಾಗಿದೆ. ನೂರಾರು ಮೀನುಗಾರಿಕಾ ದೋಣಿಗಳು ಇಲ್ಲಿ ನಿಲುಗಡೆಯಾಗುತ್ತಿದ್ದರೂ ಸಮರ್ಪಕ ಮೂಲಸೌಕರ್ಯ ಇನ್ನೂ ಮರೀಚಿಕೆಯಾಗಿದೆ. ಸಮರ್ಪಕ ಶೌಚಾಲಯ ವ್ಯವಸ್ಥೆ, ಸಿ.ಸಿ.ಟಿ.ವಿ. ಅಳವಡಿಗೆ ಮಾಡಬೇಕೆಂದು ಮೀನುಗಾರರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಅದು ಇನ್ನೂ ಪೂರ್ಣರೂಪದಲ್ಲಿ ಅನುಷ್ಠಾನವಾಗಿಲ್ಲ.
ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಂದರು ಕೂಡ ಪ್ರಮುಖ ಮೀನುಗಾರಿಕಾ ಕೇಂದ್ರವಾಗಿದೆ. ಈ ಬಂದರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳು ಇನ್ನೂ ಪುರ್ಣಗೊಂಡಿಲ್ಲ ಎನ್ನುತ್ತಾರೆ ಅಲ್ಲಿನ ಮೀನುಗಾರರು.
ಡೀಸೆಲ್ ಸಹಾಯಧನ ಹೆಚ್ಚಳ ಮಾಡಬೇಕು, ಹಳೆಯ ದೋಣಿಗಳ ಎಂಜಿನ್ ಬದಲಾವಣೆಗೆ ನೆರವು ನೀಡಬೇಕು, ಕರಾವಳಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕೆಂಬ ಬೇಡಿಕೆಗಳೂ ಮೀನುಗಾರರಿಂದ ಕೇಳಿ ಬಂದಿವೆ.
ಮಲ್ಪೆ ಬಂದರಿನಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಬೇಕು. ನಾಡದೋಣಿ ಮೀನುಗಾರರ ನೆರವಿಗೂ ಯೋಜನೆಗಳನ್ನು ಘೋಷಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.
‘ಹೂಳೆತ್ತಲು ಮುತುವರ್ಜಿ ಅಗತ್ಯ’
ಮಲ್ಪೆ ಬಂದರಿನಲ್ಲಿ ಬಹಳಷ್ಟು ಮೀನುಗಾರಿಕಾ ದೋಣಿಗಳ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಪಡುಕರೆಯಲ್ಲಿ ಜೆಟ್ಟಿ ನಿರ್ಮಾಣ ಮಾಡಬೇಕು. ಮಲ್ಪೆ ಅಯ್ಯಪ್ಪ ಮಂದಿರದ ಸಮೀಪದ ತೋಡಿನ ಹೂಳೆತ್ತಿದರೆ ನಾಡದೋಣಿಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ತಿಳಿಸಿದರು.
ಮಲ್ಪೆ ಬಂದರು ವ್ಯಾಪ್ತಿಯ ನದಿಯಿಂದಲೂ ಹೂಳೆತ್ತಬೇಕು. ಮಲ್ಪೆ ಬಂದರಿನ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.