ADVERTISEMENT

ಉಡುಪಿ: ಬುದ್ಧಿ ಮಾತು ಕೇಳದೆ ಸಮುದ್ರಕ್ಕಿಳಿದು ಪ್ರಾಣಬಿಟ್ಟ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:04 IST
Last Updated 8 ಸೆಪ್ಟೆಂಬರ್ 2025, 6:04 IST
<div class="paragraphs"><p>ಸಾಂದರ್ಭಿಕ ಚಿತ್ರ </p></div>

ಸಾಂದರ್ಭಿಕ ಚಿತ್ರ

   

ಕುಂದಾಪುರ: ಬೆಂಗಳೂರಿನಿಂದ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದ 10 ವಿದ್ಯಾರ್ಥಿಗಳು ಪೊಲೀಸರು ಮತ್ತು ಸ್ಥಳೀಯರು ನೀಡಿದ್ದ ಎಚ್ಚರಿಕೆ, ಬುದ್ಧಿಮಾತನ್ನು ಕಡೆಗಣಿಸಿ ಭಾನುವಾರ ಸಮುದ್ರಕ್ಕೆ ಇಳಿದಿದ್ದರಿಂದ ಸಂಜೆ ಮೂವರು ಪ್ರಾಣ ಬಿಡುವಂತಾಯಿತು.

ಶನಿವಾರ ಸಂಜೆಯ ವೇಳೆಗೆ ಕುಂಭಾಶಿಗೆ ಬಂದಿದ್ದ ವಿದ್ಯಾರ್ಥಿಗಳ ತಂಡ, ಖಾಸಗಿ ಲಾಡ್ಜ್ ಒಂದರಲ್ಲಿ ತಂಗಿತ್ತು. ತಡ ರಾತ್ರಿಯವರೆಗೂ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಂಡಿದ್ದ ರಾತ್ರಿಯ ಗಸ್ತು ಕರ್ತವ್ಯದಲ್ಲಿ ಇದ್ದ ಕುಂದಾಪುರದ ಪೊಲೀಸ್ ಅಧಿಕಾರಿಯೊಬ್ಬರು ಗದರಿಸಿ, ಲಾಡ್ಜ್‌ಗೆ ಕಳುಹಿಸಿದ್ದರು ಎನ್ನಲಾಗಿದೆ.

ADVERTISEMENT

ಭಾನವಾರ ಬೆಳಿಗ್ಗೆ 7.30ರ ವೇಳೆಗೆ 3- 4 ವಿದ್ಯಾರ್ಥಿಗಳು ಗೋಪಾಡಿಯ ಚರ್ಕಿಕಡು ಎಂಬಲ್ಲಿನ ಸಮುದ್ರ ಕಿನಾರೆಗೆ ಬಂದಿದ್ದರು. ಅವರ ಉತ್ಸಾಹವನ್ನು ಕಂಡಿದ್ದ ಸ್ಥಳೀಯರು, ಅಲ್ಲಿನ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಮಧ್ಯಾಹ್ನ ವೇಳೆಗೆ ಲಾಡ್ಜ್‌ನಲ್ಲಿ ಇದ್ದ ಉಳಿದ ಸಂಗಡಿಗರನ್ನು ಅಲ್ಲಿಗೆ ಕರೆಸಿಕೊಂಡಿದ್ದ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದರು. ಉಪ್ಪು ನೀರು ಚರ್ಮಕ್ಕೆ ಅಲರ್ಜಿ ಆಗುತ್ತದೆ ಎನ್ನುವ ಕಾರಣದಿಂದ ಅಂಜನ್ ಎಂಬ ವಿದ್ಯಾರ್ಥಿ ನೀರಿಗೆ ಇಳಿದಿರಲಿಲ್ಲ.

ಬೆಳಿಗ್ಗೆಯಷ್ಟೇ ಯುವಕರಿಗೆ ಬುದ್ಧಿಮಾತು ಹೇಳಿ ಹೋಗಿದ್ದ ಸ್ಥಳೀಯ ಮೀನುಗಾರ ಉಮೇಶ್ ಅವರು ಮಧ್ಯಾಹ್ನ ಊಟಮಾಡುತ್ತಿದ್ದಾಗ (ಮಧ್ಯಾಹ್ನ 1.30ರ ಸುಮಾರಿಗೆ) ಬೊಬ್ಬೆ ಕೇಳಿಸಿದೆ. ಊಟವನ್ನು ಅರ್ಧಕ್ಕೆ ಬಿಟ್ಟು ಓಡಿ ಬಂದು ಇಬ್ಬರನ್ನು ರಕ್ಷಿಸಿದ್ದಾರೆ. ಸುದ್ದಿ ತಿಳಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಬಂದ ಈಶ್ವರ್ ಮಲ್ಪೆ ತಂಡದವರು, ನೀರುಪಾಲಾದ ಮೂವರು ವಿದ್ಯಾರ್ಥಿಗಳ ಶವವನ್ನು ಮೇಲಕ್ಕೆ ಎತ್ತಿದರು.

ಶಾಸಕರ ಭೇಟಿ: ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದ ಶಾಸಕ ಎ. ಕಿರಣ್‌ಕುಮಾರ ಕೊಡ್ಗಿ ಅವರು, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು, ಪೊಲೀಸ್ ಅಧಿಕಾರಿಗಳೊಂದಿಗೆ ಮುಂದಿನ ಕಾನೂನು ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.