ಉಡುಪಿ: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲಿನಿಕಲ್ ಬಯೋಲಜಿ ಮತ್ತು ಸಂತಾನೋತ್ಪತ್ತಿ ವಿಜ್ಞಾನ ವಿಭಾಗಗಳ ವತಿಯಿಂದ ವಿಶ್ವ ಭ್ರೂಣಶಾಸ್ತ್ರಜ್ಞರ ದಿನಾಚರಣೆ ಅಂಗವಾಗಿ ಓಪನ್ ಡೇ ಕಾರ್ಯಕ್ರಮ ನಡೆಯಿತು.
ಉದ್ಘಾಟಿಸಿದ ಮಣಿಪಾಲ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ.ಶರತ್ ರಾವ್, ಸಂತಾನೋತ್ಪತ್ತಿ ಔಷಧದ ಭವಿಷ್ಯವು ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞರ ಪರಿಣತಿ, ಸಮರ್ಪಣೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ವೃತ್ತಿಪರರು ದಂಪತಿಗಳಿಗೆ ಬಂಜೆತನದ ಸವಾಲುಗಳನ್ನು ಜಯಿಸಲು, ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಲಿದ್ದಾರೆ ಎಂದರು.
ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಸುಧಾರಿತ ತರಬೇತಿ, ಸಂಶೋಧನೆಯ ಮಹತ್ವದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರನಾಳ ಶಿಶು ಸೃಷ್ಟಿಯ (ಐವಿಎಫ್) ಪ್ರಕ್ರಿಯೆ ಸನಿಹದಿಂದ ಅವಲೋಕಿಸುವ, ಭ್ರೂಣಶಾಸ್ತ್ರದ ತಜ್ಞರೊಂದಿಗೆ ಸಂವಾದ ನಡೆಸುವ ಅವಕಾಶ ನೀಡಲಾಯಿತು.
‘ವಿಶ್ವ ಭ್ರೂಣಶಾಸ್ತ್ರಜ್ಞರ ದಿನ’ವನ್ನು ಜಗತ್ತಿನ ಪ್ರಥಮ ಪ್ರಣಾಳ ಶಿಶುವಾದ ಲೂಯಿಸ್ ಜಾಯ್ ಬ್ರೌನ್ನ ಜನ್ಮದಿನದಂದು ಆಚರಿಸಲಾಗುತ್ತಿದ್ದು, ಮಣಿಪಾಲದ ಸುತ್ತಮುತ್ತಲಿನ ಕಾಲೇಜುಗಳ ಜೀವವಿಜ್ಞಾನದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.