
ಬೈಂದೂರು: ಈ ಬಾರಿ ಮನರಂಜನೆಯ ಜೊತೆಗೆ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರ ಉದ್ಯೋಗ ವ್ಯವಹಾರಗಳಿಗೆ ವೇದಿಕೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಬೈಂದೂರು ಉತ್ಸವದಲ್ಲಿ ಮಾಡಿಕೊಡಲಾಗುವುದು. ಅದರ ಮುಂದುವರಿದ ಭಾಗವಾಗಿ ಪ್ರತಿ ಗ್ರಾಮದಲ್ಲಿ ಗ್ರಾಮೋತ್ಸವ ಏರ್ಪಡಿಸಿ ಆರೋಗ್ಯ ತಪಾಸಣೆ, ಮೇಳಗಳು, ಕೃಷಿ ಪ್ರದರ್ಶನ, ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಗಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು.
ಅವರು ಭಾನುವಾರ ಮದ್ದೋಡಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಬೈಂದೂರು ಉತ್ಸವದ ಪ್ರಯುಕ್ತ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ನಡೆದ ಯಡ್ತರೆ ಗ್ರಾಮೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ತಪಾಸಣೆ, ಸಾಕು ನಾಯಿ, ಹಸುಗಳಿಗೆ ಲಸಿಕೆ, ಕೃಷಿ ಇಲಾಖೆಯಿಂದ ರೈತರಿಗೆ ಸಿಗಬಹುದಾದ ಸೌಲಭ್ಯ, ಸಹಾಯ ಧನಗಳ ಬಗ್ಗೆ ಮಾಹಿತಿ ನೀಡಲಾಯಿತು. ಹಗ್ಗಜಗ್ಗಾಟ ಸ್ಫರ್ಧೆ ನಡೆಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಬಟವಾಡಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ, ಯಡ್ತರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜೈಸನ್ ಎಂ.ಡಿ, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ, ತೋಟಗಾರಿಕೆ ಇಲಾಖೆಯ ಪ್ರವೀಣ, ಕೃಷಿ ವಿಜ್ಞಾನ ಕೇಂದ್ರದ ಧನಂಜಯ, ಎಸ್ಡಿಎಂಸಿ ಅಧ್ಯಕ್ಷ ರಾಜು ಮರಾಠಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಶೆಟ್ಟಿ, ಮುಖಂಡ ಗೋಪಾಲ ಶೆಟ್ಟಿ ಭಾಗವಹಿಸಿದ್ದರು.
ವಿದ್ಯಾಥಿಗಳು ಪ್ರಾರ್ಥಿಸಿದರು, ಮುಖ್ಯಶಿಕ್ಷಕ ವಿಠಲ ದೇವಾಡಿಗ ಸ್ವಾಗತಿಸಿದರು. ಯೋಗೇಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕ ರಾಮಕೃಷ್ಣ ದೇವಾಡಿಗ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.