ADVERTISEMENT

ಜಲಪಾತದಲ್ಲಿ ಕೊಚ್ಚಿಹೋದ ಯುವಕ: ಜ್ಯೋತಿರಾಜ್ ನೇತೃತ್ವದಲ್ಲಿ ಮುಂದುವರಿದ ಶೋಧಕಾರ್ಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 12:49 IST
Last Updated 25 ಜುಲೈ 2023, 12:49 IST
   

ಕುಂದಾಪುರ (ಉಡುಪಿ ಜಿಲ್ಲೆ): ಭಾನುವಾರದ ರಜೆ ಕಳೆಯಲು ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿಯ ಕೆ.ಎಚ್. ನಗರದಿಂದ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತಕ್ಕೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಜಲಪಾತದ ನೀರಿನಲ್ಲಿ ಕೊಚ್ಚಿ ಹೋದ ಶರತ್ ಅವರ ಪತ್ತೆ ಕಾರ್ಯ ಮಂಗಳವಾರವೂ ಮುಂದುವರಿದಿದೆ.

ಮಾಹಿತಿ ಪಡೆದುಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಸಂಜೆಯೇ ಭೇಟಿ ನೀಡಿ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದರೂ, ಕಾಡು ಪ್ರದೇಶದಲ್ಲಿ ಕತ್ತಲೆ, ರಕ್ತ ಹೀರುವ ಜಿಗಣೆ(ಇಂಬಳ)ಯಿಂದಾಗಿ ಕಾರ್ಯಾಚರಣೆಗೆ ತೊಡಕಾಗಿತ್ತು.

ಸೋಮವಾರ ಶೋಧ ಕಾರ್ಯಾಚರಣೆ ನೆರವಿಗಾಗಿ ಮುಳುಗುತಜ್ಞ ಈಶ್ವರ ಮಲ್ಪೆ ಅವರ ತಂಡವನ್ನು ಕರೆಸಿ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಕಾಯ್ಕಿಣಿ, ಕೊಲ್ಲೂರು ಕಾಣಿಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಜಯಲಕ್ಷ್ಮೀ ಹುನ್ನೂರು, ಅಪರಾಧ ವಿಭಾಗದ ಪಿಎಸ್ಐ ಸುಧಾರಾಣಿ ಅವರ ನೇತೃತ್ವದಲ್ಲಿ ಸೋಮವಾರ ಸಂಜೆಯವರೆಗೂ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದರೂ ಫಲಕಾರಿಯಾಗಲಿಲ್ಲ.

ADVERTISEMENT

ಮಂಗಳವಾರ ಕೊಲ್ಲೂರಿಗೆ ಬಂದಿಳಿದ ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.