ADVERTISEMENT

ಸಾಗುವಳಿ ಭೂಮಿಗೆ ಪಟ್ಟಾ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2013, 6:49 IST
Last Updated 18 ಜನವರಿ 2013, 6:49 IST
ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಎದುರು ರೈತ ಸಂಘ ಹಸಿರುಸೇನೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಜ್ಯ ರೈತ ಸಂಘ, ಹಸಿರುಸೇನೆಯ ಮುಖಂಡ ಮಂಜುನಾಥ ಹುಚ್ಚವನಹಳ್ಳಿ ಮಾತನಾಡಿದರು
ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಎದುರು ರೈತ ಸಂಘ ಹಸಿರುಸೇನೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಜ್ಯ ರೈತ ಸಂಘ, ಹಸಿರುಸೇನೆಯ ಮುಖಂಡ ಮಂಜುನಾಥ ಹುಚ್ಚವನಹಳ್ಳಿ ಮಾತನಾಡಿದರು   

ಯಲ್ಲಾಪುರ: `ನಾವು ಬದುಕುವುದಕ್ಕಾಗಿ ಭೂಮಿ ಬೇಡುತ್ತಿದ್ದೇವೆ ಹೊರತು ರೆಸಾರ್ಟ್ ಕಟ್ಟಿ, ಉದ್ಯಮ ನಡೆಸಲು ಅಲ್ಲ. ರೈತರು ಸಾಗುವಳಿ ಮಾಡಿದ ಜಮೀನಿನ ಇಂಚು ಜಾಗವನ್ನು ಬಿಡದೇ ಮಂಜೂರಿ ಮಾಡಿ ಪಟ್ಟಾ ನೀಡಬೇಕು. ಸರ್ಕಾರದ ಆದೇಶದಂತೆ 1969ರ ಅನ್ವಯ ಎಲ್ಲಾ ಕ್ಷೇತ್ರಗಳನ್ನು ಕೂಡಲೇ ಅರಣ್ಯ ಇಲಾಖೆಯವರು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಬೇಕು' ಎಂದು ರಾಜ್ಯ ರೈತ ಸಂಘ, ಹಸಿರುಸೇನೆಯ ಮುಖಂಡ ಮಂಜುನಾಥ ಹುಚ್ಚವನಹಳ್ಳಿ ಆಗ್ರಹಿಸಿದರು.

ಅವರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ರೈತ ಸಂಘ ಹಸಿರುಸೇನೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. 

ಯಲ್ಲಾಪುರ ಪ.ಪಂ ವ್ಯಾಪ್ತಿಯಲ್ಲಿ ಸಹಸ್ರಳ್ಳಿ ಗ್ರಾಮವನ್ನು ಬೇರ್ಪಡಿಸಿ ಪ್ರತ್ಯೇಕ ಗ್ರಾ.ಪಂ ಎಂದು ಅಸತಿತ್ವಕ್ಕೆ ತರಬೇಕು. ರೈತರಿಗೆ ಆಗುತ್ತಿರುವ ವಿದ್ಯುತ್ ತೊಂದರೆ ನಿವಾರಿಸಬೇಕು ಎಂದ ಅವರು, ಸರ್ಕಾರ ಬಡ ರೈತರ ಅತಿಕ್ರಮಣ ಸಕ್ರಮಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಕುರಿತು ಕಾರ್ಯಪ್ರವೃತ್ತರಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬೆನಿತ್ ಸಿದ್ದಿ, ಅನೇಕ ವರ್ಷಗಳಿಂದ ರೈತರು ತುಂಡು ಭೂಮಿ ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದು, ಅರಣ್ಯ ಇಲಾಖೆ, ಸರ್ಕಾರ ರೈತರನ್ನು ಒಕ್ಕಲೆಬ್ಬಿಸಬಾರದು. ಅವರಿಗೆ ಪಟ್ಟಾ ನೀಡಬೇಕು. ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಹಸಿರುಸೇನೆಯ ಪ್ರಮುಖರಾದ ಮಹಾರುದ್ರಪ್ಪ ನೆಲ್ಲಿಗಣಿ, ಹನುಮಂತಪ್ಪ ಅರೆಗೊಪ್ಪ ಮುಂಡಗೋಡ, ಪ್ರಕಾಶ ಫ್ರಾನ್ಸಿಸ್ ಸಿದ್ದಿ ಹಳಿಯಾಳ, ಮಂಜುನಾಥ ಭಟ್ಟ ಹುತ್ಕಂಡ, ದತ್ತಾತ್ರೇಯ ಭಟ್ಟ ಕೂಲಿಬೇಣ ಮುಂತಾದವರು ಮಾತನಾಡಿ, ಅಕ್ರಮ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು. ಸುಮಾರು 250 ಕ್ಕೂ ಹೆಚ್ಚು ಹಸಿರುಸೇನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಭೆಗೂ ಮುಂಚೆ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅರಣ್ಯ ಇಲಾಖೆಯ ಕಛೇರಿಗೆ ಮನವಿ ಸಲ್ಲಿಸಿದರು. ಅರಣ್ಯ ಇಲಾಖೆಯಲ್ಲಿ ಎಸಿಎಫ್ ಮರಿಗೋಳಪ್ಪನವರ ಮನವಿ ಸ್ವೀಕರಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಎಂ.ವಿ.ಕಲ್ಲೂರಮಠ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.