ಕಾರವಾರ: ಲಾಕ್ಡೌನ್ನಿಂದಾಗಿ ಜಿಲ್ಲೆಯ ವಿವಿಧೆಡೆ ಬಾಕಿಯಾಗಿದ್ದ ಪಶ್ಚಿಮ ಬಂಗಾಳದ 967 ವಲಸೆ ಕಾರ್ಮಿಕರು ಇಲ್ಲಿನ ರೈಲು ನಿಲ್ದಾಣದಿಂದ ಸೋಮವಾರ ಪ್ರಯಾಣ ಬೆಳೆಸಿದರು. ಉತ್ತರ ಕನ್ನಡ ಜಿಲ್ಲಾಡಳಿತವು ಕಾರ್ಮಿಕರಿಗಾಗಿ ವಿಶೇಷ ‘ಶ್ರಮಿಕ್ ಎಕ್ಸ್ಪ್ರೆಸ್’ ರೈಲಿನ ವ್ಯವಸ್ಥೆ ಕಲ್ಪಿಸಿತ್ತು.
ಶಿರವಾಡದ ರೈಲು ನಿಲ್ದಾಣದಿಂದ ಮಧ್ಯಾಹ್ನ 2.11ಕ್ಕೆ ಸಂಚಾರ ಆರಂಭಿಸಿದ ರೈಲು, ಪಶ್ಚಿಮ ಬಂಗಾಳದ ಪುರುಲಿಯಾ ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪಲಿದೆ. ರೈಲಿನಲ್ಲಿ ಸ್ಥಳಾವಕಾಶವಿದ್ದ ಕಾರಣ ಉಡುಪಿ ನಿಲ್ದಾಣದಿಂದ 250 ಹಾಗೂ ಮಂಗಳೂರು ಜಂಕ್ಷನ್ನಿಂದ 72ಕಾರ್ಮಿಕರಿಗೆಪ್ರಯಾಣಾವಕಾಶ ನೀಡಲಾಯಿತು. ರೈಲಿನಲ್ಲಿ ಒಟ್ಟು 1,289 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ರೈಲಿನ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ, ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕಂ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.