ADVERTISEMENT

ಕಾರವಾರ: ಅಧಿಕಾರಿಗಳಿಗೆ ಎ.ಸಿ.ಬಿ ದಾಳಿಯ ಬಿಸಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 15:42 IST
Last Updated 17 ಜೂನ್ 2022, 15:42 IST
ಕಾರವಾರದ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಅವರ ಕಚೇರಿಯಲ್ಲಿ ಎ.ಸಿ.ಬಿ ಅಧಿಕಾರಿಗಳು ಶನಿವಾರ ದಾಖಲೆಗಳ ಪರಿಶೀಲನೆ ನಡೆಸಿದರು
ಕಾರವಾರದ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಅವರ ಕಚೇರಿಯಲ್ಲಿ ಎ.ಸಿ.ಬಿ ಅಧಿಕಾರಿಗಳು ಶನಿವಾರ ದಾಖಲೆಗಳ ಪರಿಶೀಲನೆ ನಡೆಸಿದರು   

ಕಾರವಾರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ, ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ಅಧಿಕಾರಿಗಳು ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಎರಡು ಕಡೆ ಶೋಧ ನಡೆಸಿದ್ದಾರೆ. ಹಲವು ಆಸ್ತಿಗಳ ವಿವರಗಳನ್ನು ಕಲೆ ಹಾಕಿದ್ದಾರೆ.

ಕಾರವಾರದ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೀವ ನಾಯಕ ಅವರ ಮನೆಗೆ ದಾಳಿ ಮಾಡಿದ ಎ.ಸಿ.ಬಿ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಅವರ ವಿರುದ್ಧವೂ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಬ್ಬುವಾಡದಲ್ಲಿರುವ ಮನೆ ಹಾಗೂ ಎಂ.ಜಿ.ರಸ್ತೆಯಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳು ದಾಳಿ ಮಾಡಿದರು. ಬೆಂಗಳೂರು, ಕನಕಪುರ ಸುತ್ತಮುತ್ತ ಕೂಡ ಶೋಧ ನಡೆಸಿದರು.

ADVERTISEMENT

ಬೆಂಗಳೂರು ನಗರದಲ್ಲಿ ಎರಡು ವಾಸದ ಮನೆಗಳು, ನೆಲಮಂಗಲದ ಲಕ್ಕಸಂದ್ರದಲ್ಲಿ ಒಂದು ಖಾಲಿ ನಿವೇಶನ, 650 ಗ್ರಾಂ ಬೆಳ್ಳಿ ಸಾಮಗ್ರಿ, ಕನಕಪುರದ ಮರಳವಾಡಿಯಲ್ಲಿ ಒಂದು ಫಾರ್ಮ್ ಹೌಸ್, ನೆಲಮಂಗಲ ತಾಲ್ಲೂಕಿನ ಮೈಲನಹಳ್ಳಿಯಲ್ಲಿ ಎರಡು ಎಕರೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನಗಳು, ಎರಡು ಕಾರುಗಳು, ₹ 30 ಸಾವಿರ ಬಗದು, ವಿವಿಧ ಬ್ಯಾಂಕ್‍ಗಳಲ್ಲಿ ₹ 24 ಲಕ್ಷ ಠೇವಣಿ ಹಾಗೂ ಉಳಿತಾಯ, ₹ 6 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ರಾಜೀವ್ ನಾಯಕ ಅವರಿಗೆ ಸಂಬಂಧಿಸಿ ಮಂಗಳೂರಿನ ಎ.ಸಿ.ಬಿ ಪಶ್ಚಿಮ ವಲಯದ ಡಿ.ವೈ.ಎಸ್.ಪಿ ವಿಕ್ಟರ್ ಸೈಮನ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿತು.

ಕಾರವಾರದ ಬೃಂದಾವನ ಅಪಾರ್ಟ್‍ಮೆಂಟ್‍ನಲ್ಲಿ ಒಂದು ವಾಸದ ಮನೆ, ಬೆಂಗಳೂರು ಮತ್ತು ಕಾರವಾರದಲ್ಲಿ ತಲಾ ಒಂದರಂತೆ ಎರಡು ಖಾಲಿ ನಿವೇಶನಗಳು, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್, 200 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ ಬೆಳ್ಳಿ ಸಾಮಗ್ರಿ, ಶಿರಸಿಯಲ್ಲಿ ನಾಲ್ಕು ಗುಂಟೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನಗಳು, ಎರಡು ಕಾರುಗಳು, ₹ 4 ಲಕ್ಷ ನಗದು, ₹ 3.50 ಲಕ್ಷ ಬ್ಯಾಂಕ್ ಠೇವಣಿ ಹಾಗೂ ಉಳಿತಾಯ, ಬ್ಯಾಂಕ್ ಲಾಕರ್‌ನಲ್ಲಿ 150 ಗ್ರಾಂ ಚಿನ್ನಾಭರಣಗಳು, ಸುಮಾರು ₹ 15 ಲಕ್ಷ ಬೆಲೆಯ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.