ಕಾರವಾರ: ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ರಾಜ್ಯ ಹೆದ್ದಾರಿ 34ರ ಮೇಲೆ ಪದೇಪದೆ ಭೂ ಕುಸಿತವಾಗುತ್ತಿದೆ. ಆದ್ದರಿಂದ ಈ ಹೆದ್ದಾರಿಯಲ್ಲಿ ಮುಂದಿನ ಆದೇಶದವರೆಗೆ ಎಲ್ಲ ವಾಹನಗಳ ಸಂಚಾರವನ್ನು (ಹಗಲು ಮತ್ತು ರಾತ್ರಿ) ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಆದೇಶಿಸಿದ್ದಾರೆ.
ಜೊಯಿಡಾ– ಕಾರವಾರ ನಡುವಿನ ಈ ರಾಜ್ಯ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಪರ್ಯಾಯ ರಸ್ತೆಯನ್ನು ಬಳಸುವಂತೆಯೂ ಸೂಚಿಸಿದ್ದಾರೆ. ಜೊಯಿಡಾ– ದಾಂಡೇಲಿ– ಕೆಸರೊಳ್ಳಿ– ಯಲ್ಲಾಪುರ– ಅಂಕೋಲಾ– ಕಾರವಾರ ಮೂಲಕ ಸಾಗಬಹುದು. ಜೊಯಿಡಾ– ಜೊಯಿಡಾ– ದಾಂಡೇಲಿ– ಕೆಸರೊಳ್ಳಿ– ಯಲ್ಲಾಪುರ– ಶಿರಸಿ– ಕುಮಟಾ ಮಾರ್ಗವನ್ನೂ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿ ಸುಮಾರು ಒಂದು ತಿಂಗಳು ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ವರ್ಷ ಜುಲೈ 11ರಂದು ಅಣಶಿಯ ಎರಡು ಕಡೆಗಳಲ್ಲಿ ಮಣ್ಣು ರಸ್ತೆಗೆ ಜಾರಿತ್ತು. ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಕಾರಣ ಭೂಕುಸಿತ ಮತ್ತೂ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.