ಶಿರಸಿ: ‘ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳವಳಿಗಾರರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಶಿಕ್ಷಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಇಲ್ಲಿನ ಮಾರುಕಟ್ಟೆ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
‘ಖಲೀಸ್ಥಾನ ಚಳವಳಿಗಾರ ಗುರುಪಥವಂತಸಿಂಗ್ ಬರಹವನ್ನು ಟ್ವಿಟರ್ ಪ್ರಕಟಿಸಿತ್ತು. ಇದನ್ನು ಅನಂತಕುಮಾರ ಹೆಗಡೆ ಟ್ವಿಟರ್ನಲ್ಲಿ ವಿರೋಧಿಸಿದ್ದರು. ಈ ಕಾರಣಕ್ಕೆ ಚಳವಳಿಗಾರರು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ, ಅವರು ಯಾವುದೇ ಕರೆಗೆ ಪ್ರತಿಕ್ರಿಯಿಸಿರಲಿಲ್ಲ. ಜುಲೈ 19ರಂದು ಅನಂತಕುಮಾರ ಅವರ ಮೊಬೈಲ್ ಫೋನಿಗೆ ‘ದೆಹಲಿ ಬನೇಗಾ ಖಲೀಸ್ಥಾನ’ ಎಂಬ ಸಂದೇಶವನ್ನು ಅವರು ಕಳುಹಿಸಿದ್ದಾರೆ ಮತ್ತು ಅದೇ ದಿನ +32460207270ಈ ಸಂಖ್ಯೆಯ ಮೂಲಕ ಪಂಜಾಬಿ ಧ್ವನಿ ಮುದ್ರಣ ಕಳುಹಿಸಿದ್ದಾರೆ. ಅದರಲ್ಲಿ ‘ನಾವು ಪ್ರತ್ಯೇಕ ಖಲೀಸ್ಥಾನ ಚಟುವಟಿಕೆಯನ್ನು ಬಹಿರಂಗವಾಗಿ ಮಾಡುತ್ತಿದ್ದೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ. ದೇಶದ್ರೋಹಿ ಕೃತ್ಯದಿಂದಲೇ ಭಾರತ ಸರ್ಕಾರವನ್ನು ಉರುಳಿಸುತ್ತೇವೆ’ ಎಂಬರ್ಥದಲ್ಲಿ ಸವಾಲು ಹಾಕಿದ್ದಾರೆ. ಈ ಸಂಗತಿಯನ್ನು ಸಂಸದರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.