
ಯಲ್ಲಾಪುರ: ರಾಷ್ಟ್ರಗೀತೆಯ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಶಾಸಕ ಶಿವರಾಮ ಹೆಬ್ಬಾರ, ‘ಸಂಸದರು ಕೇವಲ ಪ್ರಚಾರ ಪ್ರಿಯರಾಗಿ ಈ ಹೇಳಿಕೆ ನೀಡಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಸಂಸದರಿಗೆ ರಾಜಕೀಯ ಜ್ಞಾನೋದಯವು ಬಹು ದಿನಗಳ ಬಳಿಕ ಆಗಿರುವುದು ಆಶ್ಚರ್ಯದ ಸಂಗತಿ. ಪ್ರಚಾರದ ನಶೆಯಲ್ಲಿ ರಾಷ್ಟ್ರಗೌರವಕ್ಕೂ ಮೀರಿದ ಅಹಂಕಾರವನ್ನು ತೋರಿಸಿರುವ ಕಾಗೇರಿ ಅವರ ಈಚೆಗಿನ ಹೇಳಿಕೆ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ಪಂದಿಸುವ ರಾಷ್ಟ್ರಗೀತೆಗೆ ನೇರ ಅವಮಾನವಾಗಿದೆ’ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ರಾಜಕೀಯ ಬದುಕಿನಲ್ಲಿ ದೊಡ್ಡ ಹುದ್ದೆಗಳನ್ನು ನಿರ್ವಹಿಸಿ, ಇಂತಹ ಅಪ್ರಭುದ್ಧ ಹೇಳಿಕೆ ನೀಡುತ್ತಿರುವುದು ರಾಷ್ಟ್ರಪ್ರೇಮದ ಮುಖವಾಡದ ಹಿಂದೆ ರಾಷ್ಟ್ರ ನಾಯಕರಾಗಲು ಹೊರಟಿರುವವರ ನಿಜ ಮುಖವನ್ನು ಬಿಚ್ಚಿಡುತ್ತದೆ. ಹಲವು ದಶಕಗಳ ಅನುಭವದ ನಂತರವೂ ರಾಷ್ಟ್ರಭಕ್ತಿ ಎಂಬ ಅಂತರಂಗದ ಶಕ್ತಿ ಅವರಿಗೆ ಪ್ರಚಾರದ ವೇದಿಕೆಯಲ್ಲಿ ಮಾತ್ರ ನೆನಪಾಗುವುದು ದುಃಖಕರ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.