ಕಾರವಾರ:ಬೇಸಿಗೆಯಲ್ಲಿ ತೋಟಗಳಿಗೆ ನೀರು ಹಾಯಿಸಲು ನಿರ್ಮಿಸಿದ ಒಡ್ಡಿನಿಂದಲೇ (ಕಟ್ಟ) ಸಮೀಪದ ತೋಟಕ್ಕೆ ಹಾನಿಯಾಗಿದೆ. ಹತ್ತಾರು ಅಡಿಕೆ ಮರಗಳ ಬುಡ ಕೊಳೆತಿದ್ದು, ಬೀಳುವ ಹಂತ ತಲುಪಿವೆ.
ಹೊನ್ನಾವರ ತಾಲ್ಲೂಕಿನ ಹೊಸಕುಳಿ ಗ್ರಾಮದ ದೊಡ್ಡಹಿತ್ಲು ಎಂಬಲ್ಲಿ ಭಾಸ್ಕೇರಿ ಹೊಳೆಗೆ ಪ್ರತಿ ವರ್ಷದಂತೆ ಫೆಬ್ರುವರಿ ಮೊದಲ ವಾರದಲ್ಲಿ ಕಟ್ಟ ನಿರ್ಮಿಸಲಾಗಿದೆ. ಅದರ ಕೆಳಗೆ ಮತ್ತೊಂದು ಕಿರು ಕಟ್ಟ ನಿರ್ಮಿಸಿದ್ದರಿಂದ ಹತ್ತಿರದ ಅಡಿಕೆ ತೋಟ ಜಲಾವೃತವಾಗಿದೆ. 15–20 ದಿನಗಳಿಂದ ನೀರು ನಿಂತಿರುವ ಪರಿಣಾಮ ಅಡಿಕೆ ಸಸಿಗಳಿಗೆ ಕಾಂಡಕೊರಕ ಹುಳಗಳು ಹಾನಿ ಮಾಡಿವೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತೋಟದ ಮಾಲೀಕಗೋವಿಂದ ವಿ.ಹೆಗಡೆ, ‘ಈಗಾಗಲೇ ಸುಮಾರು 15 ಅಡಿಕೆ ಸಸಿಗಳ ಬುಡ ಕೊಳೆತಿದೆ. ಹತ್ತಾರು ವರ್ಷಗಳ ಹಿಂದಿನ ಗಿಡಗಳಿಗೆ ತೊಂದರೆಯಾಗಿಲ್ಲ. ಸಿಂಗಾರಗಳು ಅರಳಿದ್ದ ಎರಡು ಮೂರು ವರ್ಷ ಪ್ರಾಯದ ಸಸಿಗಳಬುಡದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸಸಿಗಳಿಗೆ ಗೊಬ್ಬರ ನೀಡಲೆಂದು ಅವುಗಳ ಬುಡದ ಕಳೆ ಮತ್ತು ಮಣ್ಣನ್ನು ಬಿಡಿಸಿದಾಗ ಈ ವಿಚಾರ ಗೊತ್ತಾಯಿತು’ ಎಂದು ವಿವರಿಸಿದರು.
‘ಫಸಲು ಬಿಡಲು ಆರಂಭಿಸಿದ ತೋಟದಲ್ಲಿ ಈ ರೀತಿ ಸಮಸ್ಯೆಯಾದರೆ ಬೆಳೆಗಾರರಿಗೆ ಭಾರಿ ಸಮಸ್ಯೆಯಾಗುತ್ತದೆ.ಈ ವರ್ಷ ಮಳೆಯೂ ಜಾಸ್ತಿಯಾಗಿತ್ತು. ಅಂತೂ ಇಂತೂತೋಟ ಉಳಿಸಿಕೊಂಡಿದ್ದೆವು. ಈಗ ಬೇಸಿಗೆಯಲ್ಲಿ ಕಟ್ಟದ ನೀರು ನಿಂತು ತೋಟ ಹಾಳಾಗಿದೆ’ ಎಂದು ಬೇಸರಿಸಿದರು.
‘ನೀರು ಹರಿಸಬೇಕಿತ್ತು’:‘ತೋಟಕ್ಕೆ ಹಾನಿಯಾದೀತು ಎಂದು ಇಲ್ಲಿ ಕಟ್ಟ ನಿರ್ಮಿಸುವಾಗಲೇ ಸಂಬಂಧಿಸಿದವರ ಗಮನಕ್ಕೆ ತಂದಿದ್ದೆ. ಆದರೂ ಕಿರು ಕಟ್ಟ ನಿರ್ಮಿಸಲಾಗಿದೆ.ಕಟ್ಟದಲ್ಲಿ ನೀರು ತುಂಬಿದ ಬಳಿಕ ಕೆಳಗೆ ಹರಿಸದ ಕಾರಣ ತೋಟದಲ್ಲಿ ಕೂಡ ಸಂಗ್ರಹವಾಯಿತು.ನಾನು ಯಾರನ್ನೂ ದೂಷಿಸುತ್ತಿಲ್ಲ. ನನ್ನ ತೋಟಕ್ಕೆ ಆಗಿರುವ ಹಾನಿಗೆ ಪರಿಹಾರ ಬೇಕು ಎಂಬುದಷ್ಟೇ ಬೇಡಿಕೆ’ ಎಂದು ಗೋವಿಂದ ಹೆಗಡೆ ಹೇಳಿದರು.
‘ಈ ಬಗ್ಗೆ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯ ಗಮನಕ್ಕೂ ತರಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.