ಕಾರವಾರ: ರಾಜ್ಯದ 'ಪ್ರಮುಖ ಸುದ್ದಿವಾಹಿನಿ'ಯಲ್ಲಿ ಕೆಲಸ ಮಾಡುತ್ತಿರುವವರು ಎಂದು ಹೇಳಿಕೊಂಡು, ನಗರದ ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ವಸೂಲಿಗೆ ಯತ್ನಿಸಿದ ಇಬ್ಬರನ್ನು ನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ರಸ್ತೆಯ ಓಬಳಪ್ಪ ಗಾರ್ಡನ್ ನಿವಾಸಿ ಸಮಂತ ರಾವ್ (44) ಹಾಗೂ ಜಯನಗರ ಆರನೇ ಬ್ಲಾಕ್ನ ನಿವಾಸಿ ವಿಜಯ್ (42) ಬಂಧಿತ ಆರೋಪಿಗಳು. ಸಮಂತ ರಾವ್ ಕೊರಿಯರ್ ಡೆಲಿವರಿ ಕೆಲಸ ಮಾಡುತ್ತಿದ್ದರೆ, ವಿಜಯ್ ಆಹಾರ ಡೆಲಿವರಿ ಮಾಡುತ್ತಿದ್ದರು.
ಕಾರವಾರದ ಅಧಿಕಾರಿಯೊಬ್ಬರಿಗೆ ನಿರಂತರವಾಗಿ ಕರೆ ಮಾಡಿ, ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಸಂಪರ್ಕಿಸಿ, 'ತಾವು ಅನಧಿಕೃತವಾಗಿ ಸಾಕಷ್ಟು ಹಣ ಗಳಿಸಿದ್ದೀರಿ. ಬೇನಾಮಿಯಾಗಿ ಆಸ್ತಿ ಸಂಪಾದಿಸಿದ್ದೀರಿ. ಅದರ ಬಗ್ಗೆ ನಮ್ಮ ವಾಹಿನಿಯಲ್ಲಿ ಸುದ್ದಿ ಮಾಡಿ ವೈರಲ್ ಮಾಡಬಾರದು ಎಂದಾದರೆ ₹ 50 ಲಕ್ಷ ಕೊಡಬೇಕು' ಎಂದು ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಅಧಿಕಾರಿಯು ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.