ಯಲ್ಲಾಪುರ: ಕಾವ್ಯ ರಚನೆ ಅದೊಂದು ತಪಸ್ಸು, ಕವಿಯ ಕಲ್ಪನೆ, ಚಿಂತನೆ ಸಮಾಜಕ್ಕೆ ದಾರಿ ದೀಪವಾಗಬೇಕು. ಆ ದೃಷ್ಟಿಯಲ್ಲಿ ಹಿಟ್ಟಿನ ಬೈಲ್ ಶಿವರಾಮ ಭಟ್ಟರ ಹನಿಗವನಗಳು ಅಂತಶಕ್ತಿಯನ್ನು ಹೊಂದಿದೆ. ಜೀವನದ ಸನ್ನಿವೇಶಗಳನ್ನ ಕವನದ ರೂಪದಲ್ಲಿ ಮುಂದಿನ ತಲೆಮಾರಿಗೆ ನೀಡಿದ್ದಾರೆ ಎಂದು ಶಿಕ್ಷಕ, ಚಿತ್ರಕಲಾವಿದ ಸತೀಶ ಯಲ್ಲಾಪುರ ಹೇಳಿದರು.
ಪಟ್ಟಣದ ಶ್ರೀ ಶಕ್ತಿ ಗಣಪತಿ ಆವರಣದಲ್ಲಿ ಶನಿವಾರ ಶ್ರೀ ಶಾರದಾಂಬಾ ಸಂಗೀತ ಸಂಸ್ಥೆ ಆಶ್ರಯದಲ್ಲಿ ಹಿರಿಯ ಕವಿ ಶಿವರಾಮ ಭಟ್ಟ ಹಿಟ್ಟಿನಬೈಲ್ ಅವರ`ಹನಿಧಾರೆ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಸಂಕಲ್ಪ ಸೇವಾ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶಿವರಾಮ ಭಟ್ಟರ ಕೃತಿಯಲ್ಲಿ ಸೊಗಸಿನ ಹನಿಗವನಗಳು ಮೂಡಿಬಂದಿದೆ. ನಾವು ಮತ್ತು ನಮ್ಮ ಮಕ್ಕಳು ಅನೇಕ ಕನಸುಗಳನ್ನು ಕಾಣುತ್ತೇವೆ. ಆ ಕನಸುಗಳು ಸ್ವಾತಿ ಮುತ್ತುಗಳಾಗಬೇಕೆ ವಿನಹ ಕಾದ ಬಂಡಿಯ ಮೇಲೆ, ಕಮಲದ ಎಲೆಯ ಮೇಲೆ ಬಿದ್ದು ಹೋಗುವಂತದ್ದಾಗಿರಬಾರದು ಎಂದರು.
ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿ ಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಕೃಷಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಹಿಂದೂಸ್ತಾನಿ ಗಾಯಕಿ ವಾಣಿ ರಮೇಶ ಹೆಗಡೆ, ಸುಮನಾ ಗಣೇಶ ಭಟ್ಟ ಕೋಪ್ಪಲ ತೋಟ ಮಾತನಾಡಿದರು.
ಕವಿ ಶಿವರಾಮ ಭಟ್ಟರ ಮಡದಿ ನಾಗವೇಣಿ ಭಟ್ಟ, ಲಕ್ಷ್ಮಿ ರಾಮಕೃಷ್ಣ ಭಟ್ಟ ಬೀದರೆಪಾಲ್ ಉಪಸ್ಥಿತರಿದ್ದರು. ದತ್ತಾತ್ರೆಯ ಹೆಗಡೆ ಹೆಡದ್ಬೈಲ್, ಗುರುಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.