ADVERTISEMENT

‘ಐ.ಬಿ’ಗೂ ಸಿಸಿಟಿವಿ ಕ್ಯಾಮೆರಾ ಕಾವಲು

₹ 2.48 ಲಕ್ಷದಲ್ಲಿ ಅಳವಡಿಕೆ: ಮತ್ತಷ್ಟು ಸುರಕ್ಷತೆ ಒದಗಿಸುವ ಉದ್ದೇಶ

ದೇವರಾಜ ನಾಯ್ಕ
Published 6 ಮೇ 2019, 20:15 IST
Last Updated 6 ಮೇ 2019, 20:15 IST
ಕಾರವಾರದ ಆರ್‌ಟಿಒ ಕಚೇರಿ ಬಳಿ ಇರುವ ಐಬಿಯಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಲು ಕಂಪ್ಯೂಟರ್ ಅಳವಡಿಸಿರುವುದು
ಕಾರವಾರದ ಆರ್‌ಟಿಒ ಕಚೇರಿ ಬಳಿ ಇರುವ ಐಬಿಯಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಲು ಕಂಪ್ಯೂಟರ್ ಅಳವಡಿಸಿರುವುದು   

ಕಾರವಾರ: ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಲೋಕೋಪಯೋಗಿ ಇಲಾಖೆಯ ಎರಡೂ ಪ್ರವಾಸಿ ಮಂದಿರಗಳಿಗೆ (ಐ.ಬಿ) ಸುರಕ್ಷತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನಗರದ ಲಂಡನ್ ಬ್ರಿಜ್‌ ಸಮೀಪದಲ್ಲಿರುವ ನೂತನ ಸರ್ಕೀಟ್ ಹೌಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಬಳಿ ಇರುವ ಪ್ರವಾಸಿ ಮಂದಿರಕ್ಕೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎರಡೂ ಕಡೆಗಳಲ್ಲಿ ತಲಾ 8ರಂತೆ ಒಟ್ಟು 16 ಕ್ಯಾಮೆರಾಗಳಿವೆ.

ಲೋಕೋಪಯೋಗಿ ಇಲಾಖೆಯ ಸಾಮಾನ್ಯ ನಿರ್ವಹಣಾ ಅನುದಾನದಲ್ಲಿ ತಲಾ ₹ 1.24 ಲಕ್ಷದಂತೆ ಒಟ್ಟು ₹ 2.48 ಲಕ್ಷವನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಒಂದು ತಿಂಗಳವರೆಗೆ ಇದರಲ್ಲಿ ವಿಡಿಯೊ ದಾಖಲೆ ಭದ್ರವಾಗಿ ಇರಲಿದೆ.ನಂತರ ಸ್ವಯಂಆಗಿ ಅವು ಅಳಿಸಿ ಹೋಗಲಿದೆ ಎಂದುಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಯಾಕೆ ಅಳವಡಿಕೆ?:

‘ಇತ್ತೀಚಿಗೆ ತುಮಕೂರಿನಿಂದ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಇಲ್ಲಿಗೆ ಭೇಟಿ ನೀಡಿದ್ದರು. ಪ್ರವಾಸಿ ಮಂದಿರಗಳು ಹೆದ್ದಾರಿಯ ಪಕ್ಕದಲ್ಲಿ ಇವೆ. ಹೆಚ್ಚು ಜನನಿಬಿಡ ಪ್ರದೇಶವೂ ಆಗಿರುವುದರಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸಲಹೆ ನೀಡಿದ್ದರು. ಇತರ ಜಿಲ್ಲೆಗಳ ಪ್ರವಾಸಿ ಮಂದಿರದಲ್ಲಿ ಈಗಾಗಲೇ ಅಳವಡಿಸಲಾಗಿದೆ. ಇಲ್ಲೂ ಅಳವಡಿಕೆಗೆ ಕ್ರಮ ವಹಿಸುವಂತೆ ನಿರ್ದೇಶಿಸಿದ್ದರು. ಹೀಗಾಗಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ್ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯ ಮುಖ್ಯ ಎಂಜಿನಿಯರ್ ಕೂಡ ಎಲ್ಲ ಜಿಲ್ಲೆಗಳಿಗೆ ಸುತ್ತೋಲೆಯನ್ನೂ ಹೊರಡಿಸಿದ್ದಾರೆ.ಹೀಗಾಗಿ ಇಲಾಖೆಯ ಎಲ್ಲ ಪ್ರವಾಸಿ ಮಂದಿರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ’ ಎಂದು ಅವರು ವಿವರಿಸಿದರು.

ಅವಶ್ಯವಿತ್ತು: 

‘ನಗರದಲ್ಲಿ ಇತ್ತೀಚಿಗೆ ಕಳವು ಹೆಚ್ಚಾಗಿದೆ. ಬೆಳ್ಳಂಬೆಳಿಗ್ಗೆ, ಜನರಿದ್ದರೂ ಹೆದರದೇ ದರೋಡೆ ನಡೆಸಲಾಗುತ್ತಿದೆ. ಇತ್ತೀಚಿಗೆ ‘ಶಿಲ್ಪ ವನ’ದ ಬಳಿ ನಿಲ್ಲಿಸಿದ್ದ ಮಹಾರಾಷ್ಟ್ರದ ಪ್ರವಾಸಿಗರ ಕಾರಿನ ಗಾಜು ಒಡೆದು ಹಣವನ್ನು ದೋಚಲಾಗಿತ್ತು. ಹೀಗಾಗಿ, ಎಲ್ಲ ಸರ್ಕಾರಿ ಕಚೇರಿಗಳಿಗೂ, ಪ್ರವಾಸಿ ಸ್ಥಳಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲೇಬೇಕಿರುವುದು ಇಂದಿನ ಅವಶ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯ ರವೀಂದ್ರ ಬಾಡಕರ್.

‘ನಗರದಲ್ಲಿರುವ ದೊಡ್ಡ ದೊಡ್ಡ ಹೋಟೆಲ್, ಮಳಿಗೆಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಬೇಕು. ಇದರಿಂದಾಗಿ ಅಪರಾಧಗಳು ಹಾಗೂ ಅನೈತಿಕ ಚಟುವಟಿಕೆಗಳು ಕಡಿಮೆ ಆಗುತ್ತವೆ. ಜತೆಗೆ, ಅಪರಾಧಿಗಳನ್ನು ಶೀಘ್ರ ಬಂಧಿಸಲು ಪೊಲೀಸರಿಗೂ ನೆರವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.