ADVERTISEMENT

ಬಡವರಿಗೆ ‘ಹೆಬ್ಬಾರ್ ರೇಷನ್ ಕಿಟ್’

ಸಮಸ್ಯೆಗೆ ಸ್ಪಂದಿಸಲು ಮುಂದಾಗಿರುವ ಸಚಿವ ಶಿವರಾಮ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 2 ಮೇ 2020, 14:37 IST
Last Updated 2 ಮೇ 2020, 14:37 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅವರು ಫಲಾನುಭವಿಗಳಿಗೆ ಕಿಟ್ ವಿತರಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅವರು ಫಲಾನುಭವಿಗಳಿಗೆ ಕಿಟ್ ವಿತರಿಸಿದರು   

ಶಿರಸಿ: ಲಾಕ್‌ಡೌನ್ ಸಂದರ್ಭದಲ್ಲಿ ತೊಂದರೆಗೆ ಸಿಲುಕಿರುವ ಕ್ಷೇತ್ರದ ಜನರಿಗೆ ನೆರವಾಗಲು ಯಲ್ಲಾಪುರ ಕ್ಷೇತ್ರದ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ‘ಹೆಬ್ಬಾರ್ ರೇಷನ್ ಕಿಟ್’ ಸಿದ್ಧಪಡಿಸಿದ್ದಾರೆ. ತಾಲ್ಲೂಕಿನ ಬಿಸಲಕೊಪ್ಪದಲ್ಲಿ ಶನಿವಾರ ಕಿಟ್ ವಿತರಣೆಗೆ ಸಚಿವರು ಚಾಲನೆ ನೀಡಿದರು.

ಜವಾರಿ ಜೋಳ, ಗೋದಿ ಹಿಟ್ಟು, ಅವಲಕ್ಕಿ, ರವಾ, ಅಡುಗೆ ಎಣ್ಣೆ, ಉಪ್ಪು, ಬಟಾಟೆ, ಈರುಳ್ಳಿ, ಅರಿಸಿನ ಪುಡಿ, ಮೆಣಸಿನ ಪುಡಿ, ಚಹಾ ಪುಡಿ ಒಳಗೊಂಡ ಕಿಟ್ ಜೊತೆಗೆ, ಅನಾನಸ್ ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಪ್ರತಿ ಕಿಟ್‌ನೊಂದಿಗೆ ಒಂದು ಅನಾನಸ್ ಹಣ್ಣನ್ನು ಸಚಿವರು ವಿತರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ 51,168 ಬಿಪಿಎಲ್, 2760 ಅಂತ್ಯೋದಯ ಅನ್ನ ಹಾಗೂ ಮಂಜೂರಿಗೆ ಬಾಕಿ ಇರುವ 500 ಬಿಪಿಎಲ್ ಕಾರ್ಡ್‌ನವರನ್ನೊಳಗೊಂಡು ಅಂದಾಜು ₹4 ಕೋಟಿ ಮೊತ್ತದ ಜೀವನಾವಶ್ಯಕ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ’ ಎಂದರು.

ADVERTISEMENT

‘ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ, ಯಲ್ಲಾಪುರ, ಮುಂಡಗೋಡ ತಾಲ್ಲೂಕಿನ ಬಡವರಿಗೆ ಕಿಟ್ ನೀಡಲಾಗುತ್ತದೆ. ಜಾತಿ–ಮತ, ಪಕ್ಷ–ಪಂಗಡದ ಭೇದವಿಲ್ಲದೇ, ಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡುತ್ತೇವೆ. ನನಗೆ ಮತ ನೀಡಿರುವ ಮತದಾರರ ಸಮಸ್ಯೆಗೆ ಸ್ಪಂದಿಸಬೇಕಾಗಿರುವುದು ಕರ್ತವ್ಯ’ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ವಿನೋದ ಪ್ರಭು, ಭಾಸ್ಕರ ನಾರ್ವೇಕರ, ದ್ಯಾಮಣ್ಣ ದೊಡ್ಮನಿ, ಜಿ.ಕೆ.ಹೆಗಡೆ, ಚಂದ್ರು ದೇವಾಡಿಗ, ಉಷಾ ಹೆಗಡೆ, ಮಂಗಳಾ ನಾಯ್ಕ, ಎಸ್.ಎನ್.ಭಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.