ADVERTISEMENT

ಮಳೆ ಮಾಪನ ಯಂತ್ರದ ವರದಿ ಬಗ್ಗೆ ವಿಮೆ ಕಂಪನಿ ಆಕ್ಷೇಪ: ಪರಿಹಾರ ಪಾವತಿಗೆ ತಗಾದೆ

ರಾಜೇಂದ್ರ ಹೆಗಡೆ
Published 14 ನವೆಂಬರ್ 2025, 3:51 IST
Last Updated 14 ನವೆಂಬರ್ 2025, 3:51 IST
ಅಡಿಕೆ ಕೊಯ್ಲು (ಪ್ರಾತಿನಿಧಿಕ) 
ಅಡಿಕೆ ಕೊಯ್ಲು (ಪ್ರಾತಿನಿಧಿಕ)    

ಶಿರಸಿ: 2023-24ನೇ ಸಾಲಿನಲ್ಲಿ ಮಳೆ ಮಾಪನ ಯಂತ್ರಗಳ ಮಾಹಿತಿ ವೈಫಲ್ಯ ಮುಂದಿಟ್ಟುಕೊಂಡು ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ನೀಡಲು ರೈತರಿಗೆ ಸತಾಯಿಸಿದ್ದ ಕ್ಷೇಮಾ ಜನರಲ್ ಇನ್ಶುರೆನ್ಸ್‌ ಕಂಪನಿಯು 2024-25ನೇ ಸಾಲಿನ ಪರಿಹಾರ ನೀಡುವಲ್ಲಿಯೂ ತಗಾದೆ ತೆಗೆದಿದೆ ಎಂಬ ಆರೋಪ ರೈತರಿಂದ ವ್ಯಕ್ತವಾಗಿದೆ.

‘ಮಳೆ ಮಾಪನ ಯಂತ್ರಗಳಿಂದ ಸರಿಯಾದ ಮಳೆ ಮಾಹಿತಿ ರವಾನೆಯಾಗದ ಕಾರಣ ನೀಡಿ ವಿಮೆ ಕಂಪನಿಯು ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ನೀಡಲು ತಕರಾರು ಮಾಡಿತ್ತು. ವಿಷಯ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ವರ್ಷಗಳ ನಂತರ ವಿಮಾ ಮೊತ್ತ ರೈತರ ಖಾತೆ ಸೇರಿತ್ತು. ಪ್ರಸಕ್ತ ವರ್ಷವೂ ಕಂಪನಿ ಮತ್ತೆ ಮಳೆ ಮಾಪನ ಅಂಕಿಸಂಖ್ಯೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪರಿಹಾರ ನೀಡಲು ಆಕ್ಷೇಪಿಸುತ್ತಿದೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘2024-25ನೇ ಸಾಲಿನಲ್ಲಿ 46,860 ರೈತರು ಅಡಿಕೆ ಹೆಕ್ಟೇರ್‌ಗೆ ₹6,400 ಹಾಗೂ ಕಾಳುಮೆಣಸು ಪ್ರತಿ ಹೆಕ್ಟೇರ್‌ಗೆ ₹2,350 ವಿಮೆ ಪ್ರೀಮಿಯಂನಂತೆ ₹12.93 ಕೋಟಿ ಪ್ರೀಮಿಯಂ ಮೊತ್ತ ವಿಮಾ ಕಂಪನಿಗೆ ಭರ್ತಿ ಮಾಡಿದ್ದಾರೆ. ಆ ಸಾಲಿನ ಮಳೆಗಾಲದಲ್ಲಿ ಭಾರಿ ಮಳೆಯಿಂದ ಅಡಿಕೆ ಕೃಷಿಕರಿಗೆ ಫಸಲು ನಷ್ಟವಾಗಿದ್ದು, ಬೆಳೆ ವಿಮೆ ಮೊತ್ತ ಬೇಗನೆ ಜಮಾ ಆದರೆ ಹೆಚ್ಚಿನ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ ಅಥವಾ ನವೆಂಬರ್‌ ಮೊದಲ ವಾರದಲ್ಲಿ ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗೆ ಜಮೆಯಾಗುತ್ತದೆ. ಆದರೆ ಕಂಪನಿ ಪರಿಹಾರ ನೀಡುವ ವಿಚಾರದಲ್ಲಿ ಮತ್ತೆ ಗೊಂದಲ ಸೃಷ್ಟಿಸಿದೆ’ ಎಂದರು.

ADVERTISEMENT

‘2025-26ನೇ ಸಾಲಿಗೆ ಕ್ಷೇಮಾ ಕಂಪನಿಯನ್ನು ಹೊರಗಿಟ್ಟಿರುವ ಸರ್ಕಾರವು ಬೇರೆ ಕಂಪನಿಗೆ ವಿಮೆ ಮೊತ್ತ ತುಂಬಿಸಿಕೊಳ್ಳಲು ಅವಕಾಶ ನೀಡಿತ್ತು. ಕಳೆದ ವರ್ಷದ ಪ್ರೀಮಿಯಂ ಮೊತ್ತ ಕ್ಷೇಮಾ ಕಂಪನಿಗೇ ತುಂಬಿದ ಕಾರಣ ಪರಿಹಾರ ಕೂಡ ಅದೇ ನೀಡಬೇಕಿದೆ. ಕಳೆದ ವರ್ಷದಂತೆ ವಿಳಂಬ ಮಾಡದೆ ತಕ್ಷಣ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು’ ಎಂದು ರೈತ ಹೋರಾಟಗಾರ ಆನಂದ ಗೌಡರ್ ಹೇಳಿದರು.

ಕ್ಷೇಮಾ ಜನರಲ್ ಇನ್ಶುರೆನ್ಸ್‌ ಕಂಪನಿ ರೈತರಿಂದ ಪಡೆದ ಪ್ರೀಮಿಯಂ ಮೊತ್ತಕ್ಕೆ ವಿಳಂಬವಿಲ್ಲದೇ ಸೂಕ್ತ ಪರಿಹಾರ ನೀಡುವ ಹೊಣೆಗಾರಿಕೆ ಪ್ರದರ್ಶಿಸಬೇಕು
ಬಿ.ಪಿ.ಸತೀಶ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.