
ಮುಂಡಗೋಡ: ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ, ಸೋಮವಾರ ಹುಬ್ಬಳ್ಳಿ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಮರಳುವರು. ಕಳೆದ ವರ್ಷ ಡಿಸೆಂಬರ್ 12ರಂದು ಆವರು ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ಗೆ ಬಂದಿದ್ದರು.
ಹಿಮಾಚಲ ಪ್ರದೇಶದಲ್ಲಿ ಚಳಿ ಹೆಚ್ಚಾಗಿರುವುದರ ಜೊತೆಗೆ ದಕ್ಷಿಣ ಭಾರತದ ಟಿಬೆಟಿಯನ್ ಕಾಲೊನಿಗಳಲ್ಲಿ ವಾಸ್ತವ್ಯ ಮಾಡುವಂತೆ ಬೌದ್ಧ ಅನುಯಾಯಿಗಳ ಬೇಡಿಕೆ ಹೆಚ್ಚಿದ್ದರಿಂದ, ಇದೇ ಮೊದಲ ಬಾರಿಗೆ ಅತಿ ಹೆಚ್ಚು ದಿನಗಳು ಇಲ್ಲಿ ತಂಗಿದ್ದರು.
ದಲೈಲಾಮಾ ಅವರು ಡಿಸೆಂಬರ್ 16ರಿಂದ ಆರಂಭಗೊಂಡು ಫೆಬ್ರುವರಿ 7ರವರೆಗೆ ಒಟ್ಟು 13 ಸಾವಿರಕ್ಕೂ ಹೆಚ್ಚು ಜನರಿಗೆ ಆಶೀರ್ವಾದಿಸಿದ್ದಾರೆ. ಇವರಲ್ಲಿ ಅತಿ ಹೆಚ್ಚು 9,479 ಟಿಬೆಟಿಯನ್ ಮತ್ತು ಹಿಮಾಚಲ ಪ್ರದೇಶದ ಬೌದ್ಧ ಅನುಯಾಯಿಗಳು ಇದ್ದಾರೆ. ಇನ್ನುಳಿದಂತೆ 2,369 ಭಾರತೀಯರು, 1,274 ವಿದೇಶಿಯರು ಭೇಟಿಯಾದರು.
ಇಲ್ಲಿನ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ, ಭಾನುವಾರ ಹಾಗೂ ಪೂಜಾ ದಿನಗಳಂದು ಹೊರತುಪಡಿಸಿ, ಪ್ರತಿದಿನ 400ರಿಂದ 500 ಜನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಆಶೀರ್ವಾದ ಪಡೆದಿರುವುದು ವಿಶೇಷ. ಕೇಂದ್ರ ಸಚಿವ ಕಿರಣ ರಿಜಿಜು, ರಾಜ್ಯ ಸಭೆಯ ಉಪಸಭಾಪತಿ, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಧು ಬಂಗಾರಪ್ಪ, ಶಾಸಕ ಶಿವರಾಮ ಹೆಬ್ಬಾರ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ಸಂಸದರು, ಮಾಜಿ ಶಾಸಕರು ದಲೈಲಾಮಾ ಅವರನ್ನು ಭೇಟಿಯಾಗಿದ್ದರು. ಅಲ್ಲದೇ, ಹಲವು ಮಠಾಧೀಶರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭೇಟಿಯಾಗಿದ್ದರು.
‘ಇಲ್ಲಿನ ವಾತಾವರಣ ಉತ್ತಮವಾಗಿದ್ದು, ದಲೈಲಾಮಾ ಅವರ ಆರೋಗ್ಯದ ದೃಷ್ಟಿಯಿಂದ ಹೇಳಿ ಮಾಡಿಸಿದಂತಿದೆ. ಟಿಬೆಟಿಯನ್ ಕ್ಯಾಂಪ್ನಲ್ಲಿ ಸ್ವಚ್ಛತೆಗೆ ಬಿಕ್ಕುಗಳು ಮೊದಲ ಆದ್ಯತೆ ನೀಡುತ್ತಾರೆ. ಇದರಿಂದ, ದಲೈಲಾಮಾ ಇಷ್ಟು ದಿನಗಳ ಕಾಲ ಇಲ್ಲಿ ತಂಗಲು ಪ್ರಮುಖ ಕಾರಣವಾಗಿದೆ. ನಿರಾಶ್ರಿತರಾಗಿ ಭಾರತಕ್ಕೆ ಬಂದಾಗ, ಪೂರ್ವಜರು ತಮ್ಮ ಜೊತೆ ಬೌದ್ಧ ಅಧ್ಯಯನದ ಗ್ರಂಥಗಳನ್ನು ತೆಗೆದುಕೊಂಡು ಬಂದಿದ್ದರು. ಇದರಿಂದ ನಳಂದಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗಿದೆ. ಮೂಲ ಪರಂಪರೆಯ ಶಿಕ್ಷಣ ನೀಡುವುದರಿಂದಲೇ, ಮಂಗೋಲಿಯಾ ಸಹಿತ ಇತರೆ ದೇಶಗಳ ಬೌದ್ಧ ಅನುಯಾಯಿಗಳು ಇಲ್ಲಿ ಬಂದು ಗೆಶೆ ಪದವಿ ಪಡೆಯುತ್ತಿದ್ದಾರೆ. ಗೆಶೆ ಪದವಿ ಪಡೆಯಲು 15ರಿಂದ 25 ವರ್ಷಗಳ ಕಾಲ ಸಮಯ ಹಿಡಿಯುತ್ತದೆ’ ಎಂದು ಕೇಂದ್ರ ಟಿಬೆಟಿಯನ್ ಆಡಳಿತ ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಜಿಗ್ಮೆ ಸುಲ್ಟ್ರಿಮ್ ತಿಳಿಸಿದರು.
‘ದಲೈಲಾಮಾ ಅವರ ಆಶೀರ್ವಾದ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳು ಬಂದಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ. ಕೆಲವರಿಗೆ ಅರ್ಜಿ ಸಲ್ಲಿಸಿದರೂ, ಸಮಯಾವಕಾಶದಿಂದ ಭೇಟಿಯಾಗಲು ಅವಕಾಶ ಸಿಕ್ಕಿರಕ್ಕಿಲ್ಲ. ಅಂತಹ, ಅರ್ಜಿಗಳ ಸಂಖ್ಯೆ ಕಡಿಮೆ ಇರಬಹುದು. ಫೆ.8ರಂದು ವಿಶೇಷ ಪೂಜಾ ಕಾರ್ಯಕ್ರಮವಿದ್ದು, ಅದರ ನಂತರ, ಸುದೀರ್ಘ 58 ದಿನಗಳ ಪ್ರವಾಸಕ್ಕೆ ತೆರೆ ಬೀಳಲಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಉತ್ತಮ ವ್ಯವಸ್ಥೆ ಕಲ್ಪಿಸಿದೆ. ದಲೈಲಾಮಾ ಈ ವರ್ಷದ ಅಂತ್ಯದಲ್ಲಿ ಮತ್ತೆ ದಕ್ಷಿಣ ಭಾರತ ಪ್ರವಾಸ ಮಾಡುವ ಸಾಧ್ಯತೆ ಇದೆ. ಆದರೆ, ಸ್ಥಳ ಯಾವುದೆಂದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.