ಕಾರವಾರ/ ದಾಂಡೇಲಿ: ಹಳೆ ದಾಂಡೇಲಿಯಲ್ಲಿ ಮನೆಯೊಂದರ ಶೌಚಾಲಯದಿಂದ ಮಲವನ್ನು ಪೌರ ಕಾರ್ಮಿಕರಿಂದ ಹೊರಿಸಿ ಸಾಗಿಸಿದ ಪ್ರಕರಣದಲ್ಲಿಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹಾಗೂ ದಾಂಡೇಲಿ ಪೌರಾಯುಕ್ತರು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ಒಂದುವೇಳೆ ಪ್ರಕರಣ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪ್ರತ್ಯೇಕ ದೂರು:ಈ ನಡುವೆ ಶೌಚಾಲಯ ಸ್ವಚ್ಛಗೊಳಿಸಿ, ಮಲ ಹೊರಿಸಿದ ಪ್ರಕರಣದಲ್ಲಿ ಭಾಗಿಯಾದ ಪೌರ ಕಾರ್ಮಿಕರೇ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರತ್ಯೇಕ ದೂರೊಂದನ್ನು ದಾಖಲಿಸಿದ್ದಾರೆ.
‘ಪೌರ ಕಾರ್ಮಿಕರ ಮೊಕದ್ದಂ ನಮ್ಮಿಂದ ಒತ್ತಾಯದಿಂದ ಡಿ.11ರಂದು ಈ ಕೆಲಸ ಮಾಡಿಸಿದ್ದಾರೆ. ನಾವು ಒಪ್ಪದಿದ್ದಾಗ ಪೌರಾಯುಕ್ತರೇ ಈ ಕೆಲಸ ಮಾಡಲು ಹೇಳಿದ್ದಾರೆ ಎಂದು ಹೆದರಿಸಿದ್ದಾರೆ. ಆ ಕಾರಣಕ್ಕಾಗಿ ನಾವು ಮಲ ಸಾಗಿಸುವ ಕೆಲಸ ಮಾಡಿದ್ದೇವೆ. ನಮಗೆ ಅನ್ಯಾಯವಾಗಿದೆ. ಹಾಗಾಗಿ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಪೌರ ಕಾರ್ಮಿಕರಾದ ರಂಗನಾಯಕಲು, ಅಭಿಷೇಕದೊಗಿಪೊಳು, ಮಂಜುನಾಥ ಮೊಹಿಕ್ಕರ, ನರಸಿಂಹ ದಾಸರಿ ದೂರಿನಲ್ಲಿ ಮನವಿ ಮಾಡಿದ್ದಾರೆ.
ಡಿ.ವೈ.ಎಸ್.ಪಿ ಮೋಹನಪ್ರಸಾದ ನೇತೃತ್ವದಲ್ಲಿ ಪೊಲೀಸರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪಂಚನಾಮೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.