
ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುವ 2016ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ಈಚೆಗೆ ತಾಲ್ಲೂಕಿನ ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ ಸ್ವಾಮೀಜಿ ಹವ್ಯಕ ಸಭಾ ಭವನದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುರ್ಡೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಹಣಮಂತ ಬಿರಾದಾರ ದುಶ್ಚಟಗಳನ್ನು ಬಿಡುವುದಕ್ಕೆ ದೃಢ ಮನಸ್ಸು ಅಗತ್ಯ. ಜೊತೆಗೆ ವೈದ್ಯಕೀಯ ನೆರವು ಮತ್ತು ಸಾಮಾಜಿಕ ಬೆಂಬಲ ದೊರೆತಾಗ ಮದ್ಯ ಸೇವನೆಯನ್ನು ಬಿಡುವ ಸಂಕಲ್ಪ ಯಶಸ್ವಿ ಯಾಗುತ್ತದೆ. ಇದಕ್ಕೆಲ್ಲ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಾ, ಧರ್ಮ ಉಳಿಸುವ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಮುರ್ಡೇಶ್ವರದ ಅಧ್ಯಕ್ಷ ಸತೀಶ ಶೇಟ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ್, ಉತ್ತರ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಾಮನ ನಾಯ್ಕ ಮಂಕಿ, ಶ್ರೀಧರ ನಾಯ್ಕ ಆಸರಕೇರಿ, ಸಾಥಯ್ಯ ಹೊನ್ನ ನಾಯ್ಕ ಮಾನತಾಡಿದರು.
ವೇದಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನ ಮಾಲಕ ಕೃಷ್ಣಾನಂದ ಭಟ್ಟ ಬಲ್ಸೆ, ಮಾವಳ್ಳಿ-೧ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಗ್ರಾಮ ಪಂಚಾಯ್ತಿ ಮಾವಳ್ಳಿ-೨ರ ಅಧ್ಯಕ್ಷೆ ನಾಗರತ್ನ ಪಡಿಯಾರ್, ಗಣ್ಯರಾದ ಶಂಕರ ಭಟ್ರಹಿತ್ಲು ಉಪಸ್ಥಿತರಿದ್ದರು. ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಜನಜಾಗೃತಿ ವೇದಿಕೆ ಪ್ರಾರಂಭ, ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.