ಹಳಿಯಾಳ: ಪಟ್ಟಣದ ಜನರಿಗೆ ಆಶ್ರಯ ಮನೆಯ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 500 ಮನೆಗಳ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಶಾಸಕ ಆರ್.ವಿ ದೇಶಪಾಂಡೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಎಲ್ಲಾ ಬಡಜನರ ಶ್ರಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯೋಜನೆಗಳನ್ನು ಅರಿತು ಸದುಪಯೋಗ ಪಡೆದುಕೊಳ್ಳಿ’ ಎಂದರು.
ಜಿ+2 ಅಲ್ಪ ಸಂಖ್ಯಾತರಿಗಾಗಿ ಮೀಸಲಿಟ್ಟ ಆಶ್ರಯ ಮನೆ ಮಂಜೂರಾತಿಗಾಗಿ 22 ಮನೆಗಳ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಬಾಲಕಿಯರು ಚೀಟಿ ಎತ್ತುವ ಮೂಲಕ 5 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಯಿತು. ಪರಿಶಿಷ್ಟ ಜಾತಿ, ಪಂಗಡದ 10 ಅರ್ಜಿಗಳ ಫಲಾನುಭವಿಗಳಲ್ಲಿ 4 ಜನರಿಗೆ ಚೀಟಿ ಎತ್ತುವ ಮೂಲಕ ಮನೆ ಹಂಚಿಕೆಗೆ ಆಯ್ಕೆ ಮಾಡಲಾಯಿತು. ಸಾಮಾನ್ಯ ಇತರೆ ವರ್ಗದ 20 ಫಲಾನುಭವಿಗಳಿಗಾಗಿ ಮೀಸಲಿಟ್ಟ ಮನೆಗಳಲ್ಲಿ 16 ಅರ್ಜಿಗಳು ಬಂದಿದ್ದು, ಎಲ್ಲ 16 ಜನರಿಗೆ ಮನೆ ಹಂಚಿಕೆ ಮಾಡಲಾಯಿತು.
ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಮಾತನಾಡಿ, ‘ಈಗಾಗಲೇ ಮನೆ ಹಂಚಿಕೆಯಾದ ಫಲಾನುಭವಿಗಳು ಡಿ.31ರ ಒಳಗಾಗಿ ಸಾಮಾನ್ಯ ವರ್ಗದವರು ₹1ಲಕ್ಷ 60 ಸಾವಿರ, ಪರಿಶಿಷ್ಟ ಜಾತಿ ಪಂಗಡದವರು ₹1 ಲಕ್ಷ ಪುರಸಭೆಗೆ ಭರಣ ಮಾಡಬೇಕು’ ಎಂದರು.
ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿ ಸದಸ್ಯರಾದ ಉಮೇಶ ಬೋಳಶೆಟ್ಟಿ, ಅಣ್ಣಪ್ಪಾ ಬಂಡಿವಾಡ, ರಾಜೇಶ್ವರಿ ಬಾಳೆಕುಂದ್ರಿ, ಇಜಾಜ್ ಅಹ್ಮದ್ ಮುಗದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.