ADVERTISEMENT

ಕಾರವಾರ: ‘ದೇಸಿ ಭತ್ತಗಳ ತಳಿ’ಗೆ ರೈತನೇ ರಕ್ಷಕ

ಕೃಷಿ ಇಲಾಖೆ ಸಮೀಕ್ಷೆ ವೇಳೆ ಬಹಿರಂಗ:261 ಬಗೆಯ ಭತ್ತ ಸಂರಕ್ಷಣೆ

ಗಣಪತಿ ಹೆಗಡೆ
Published 7 ಸೆಪ್ಟೆಂಬರ್ 2025, 4:26 IST
Last Updated 7 ಸೆಪ್ಟೆಂಬರ್ 2025, 4:26 IST
ಶಿರಸಿ ತಾಲ್ಲೂಕಿನ ದೇವತೆಮನೆ ಗ್ರಾಮದಲ್ಲಿ ವೈವಿಧ್ಯಮಯ ತಳಿಯ ಭತ್ತ ಬೆಳೆಯುವ ಕೃಷಿಕ ಆರ್.ಜಿ.ಭಟ್ ಅವರು ಕೃಷಿ ಕಾಯಕದಲ್ಲಿ ತೊಡಗಿದ್ದರು.
(ಸಂಗ್ರಹ ಚಿತ್ರ)
ಶಿರಸಿ ತಾಲ್ಲೂಕಿನ ದೇವತೆಮನೆ ಗ್ರಾಮದಲ್ಲಿ ವೈವಿಧ್ಯಮಯ ತಳಿಯ ಭತ್ತ ಬೆಳೆಯುವ ಕೃಷಿಕ ಆರ್.ಜಿ.ಭಟ್ ಅವರು ಕೃಷಿ ಕಾಯಕದಲ್ಲಿ ತೊಡಗಿದ್ದರು. (ಸಂಗ್ರಹ ಚಿತ್ರ)   

ಕಾರವಾರ: ಅಪ್ಪಟ, ಅಪರೂಪದ ದೇಸಿ ತಳಿಯ ಭತ್ತಗಳನ್ನು ಸಂರಕ್ಷಿಸಿಕೊಂಡು ಬಂದ ರೈತರ ಸಮೀಕ್ಷೆ ಕೈಗೆತ್ತಿಕೊಂಡ ಕೃಷಿ ಇಲಾಖೆ 92 ರೈತರು ಸಂರಕ್ಷಿಸಿದ 261 ವಿಧದ ತಳಿಗಳ ಪಟ್ಟಿ ಮಾಡಿದೆ.

ಜಿಲ್ಲೆಯ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದರೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕೆಲವೇ ತಳಿಯ ಭತ್ತಗಳ ಬೇಸಾಯಕ್ಕೆ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಬಗೆಬಗೆಯ ತಳಿಗಳತ್ತ ಆಕರ್ಷಣೆ ಕಡಿಮೆ ಆಗಿದೆ. ರೈತರನ್ನು ಭತ್ತ ಬೇಸಾಯದತ್ತ ಸೆಳೆಯುವ ನಿಟ್ಟಿನಲ್ಲಿ ಈಚೆಗೆ ದೇಸಿ ಭತ್ತದ ತಳಿಗಳ ಸಂರಕ್ಷಣೆ ನಡೆಸಿದವರ ಸಮೀಕ್ಷೆ ನಡೆಸಿತ್ತು.

‘ದೇಸಿ ತಳಿಯ ಭತ್ತವನ್ನು ಸಂರಕ್ಷಣೆ ಮಾಡಿಕೊಂಡು ಬಂದವರ ಮಾಹಿತಿ ಸಂಗ್ರಹಿಸಲು ನಡೆಸಿದ ಸಮೀಕ್ಷೆಯಲ್ಲಿ 92 ರೈತರು 261 ತಳಿಯ ಭತ್ತ ಸಂರಕ್ಷಣೆ ಮಾಡಿರುವ ಮಾಹಿತಿ, ವಿವರ ದಾಖಲಿಸಿದ್ದಾರೆ. ಅವರ ಪೈಕಿ ಕುಮಟಾ ತಾಲ್ಲೂಕು ಕಾಗಾಲದ ನಾಗರಾಜ ನಾಯ್ಕ ಮತ್ತು ಶಿರಸಿ ತಾಲ್ಲೂಕಿನ ದೇವತೆಮನೆಯ ರಾಮಕೃಷ್ಣ ಭಟ್ (ಆರ್.ಜಿ.ಭಟ್) ಅತಿಹೆಚ್ಚು ತಳಿ ಸಂರಕ್ಷಿಸಿಕೊಂಡು ಬಂದಿರುವುದು ದೃಢಪಟ್ಟಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ್ ತಿಳಿಸಿದ್ದಾರೆ.

ADVERTISEMENT

‘ಜಿಲ್ಲೆಯ 8 ತಾಲ್ಲೂಕುಗಳಲ್ಲಿ ದೇಸಿ ತಳಿಗಳ ಭತ್ತ ಸಂರಕ್ಷಣೆ ಕೆಲಸ ನಡೆದಿದೆ. ಅವುಗಳ ಪೈಕಿ ಕುಮಟಾದಲ್ಲಿ 110, ಶಿರಸಿ ತಾಲ್ಲೂಕಿನಲ್ಲಿ 80 ತಳಿಗಳನ್ನು ಸಂರಕ್ಷಣೆ ಮಾಡಿರುವುದಾಗಿ ರೈತರು ಮಾಹಿತಿ ದಾಖಲಿಸಿದ್ದಾರೆ. ಈಚೆಗೆ ಇಲಾಖೆಯು ಕೆಲ ಆಹಾರ ಧಾನ್ಯಗಳಲ್ಲಿನ ದೇಸಿ ತಳಿಗಳ ಸಂರಕ್ಷಣೆ ಸಮೀಕ್ಷೆ ನಡೆಸಿದ್ದು, ಈ ವೇಳೆ ಭತ್ತದ ಅಪರೂಪದ ತಳಿಗಳು ರಕ್ಷಿಸಲ್ಪಟ್ಟಿರುವ ಮಾಹಿತಿ ಸಿಕ್ಕಿದೆ’ ಎಂದು ತಿಳಿಸಿದರು.

‘ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರ ಹೆಸರಿನಲ್ಲೇ ಆಯಾ ತಳಿಗಳ ಮಾಹಿತಿ ದಾಖಲೀಕರಣ ನಡೆಯಲಿದೆ. ಅಪರೂಪದ ತಳಿಗಳ ಬೀಜಗಳನ್ನು ಬೀಜ ಬ್ಯಾಂಕ್‌ಗಳ ಮೂಲಕ ಸಂಗ್ರಹಿಸಿ, ಸಂಶೋಧನೆ ನಡೆಸುವ ಜೊತೆಗೆ ಅವುಗಳ ಸಂರಕ್ಷಣೆಗೆ ಇಲಾಖೆ ಕ್ರಮವಹಿಸಲಿದೆ’ ಎಂದು ವಿವರಿಸಿದರು.

ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಭತ್ತದ ತಳಿಗಳ ಮೌಲ್ಯೀಕರಣ ನಡೆಯಲಿದೆ. ನಿರ್ದಿಷ್ಟ ತಳಿಗಳ ಸಂರಕ್ಷಣೆಗೆ ಆಯಾ ರೈತರಿಗೆ ಸಹಾಯಧನ ನೀಡಲಾಗುತ್ತದೆ

–ಶಿವಪ್ರಸಾದ ಗಾಂವಕರ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಅಪರೂಪದ ತಳಿಗಳಿವು

ಕೃಷಿ ಇಲಾಖೆ ಕೈಗೊಂಡಿದ್ದ ಸಮೀಕ್ಷೆಯಲ್ಲಿ ರೈತರು ಸಂರಕ್ಷಿಸಿಕೊಂಡು ಬಂದ ಅಪರೂಪದ ದೇಸಿ ಭತ್ತದ ಬಳಿಗಳಲ್ಲಿ ಕಳವೆ ಮಟ್ಟಳಗ ಹೊನ್ನಕಟ್ಟು ಜೇನುಗೂಡು ಗೌಡರ ಭತ್ತ ದೊಡ್ಡ ಭತ್ತ ಜಿಗ್ಗ ವರಟಿಗ ನೀರ ಮುಳುಗ ಕರಿ ಕಂಟಕ ಲಿಂಬೆ ಮೊಹರಿ ಪದ್ಮರೇಖಾ ಬಿಳಿ ಪೊನ್ನಿ ನೆಲ್ಲೂರು ವಂದನಾ ಸೇರಿದಂತೆ ಹಲವು ಬಗೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.