ADVERTISEMENT

ಮಾರಿಕಾಂಬಾ ದೇವಸ್ಥಾನ; ಸರಳ ಉತ್ಸವಕ್ಕೆ ಭಕ್ತರ ಅಪಸ್ವರ

ಎರಡನೆ ವರ್ಷವೂ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ

ಗಣಪತಿ ಹೆಗಡೆ
Published 5 ಅಕ್ಟೋಬರ್ 2021, 3:08 IST
Last Updated 5 ಅಕ್ಟೋಬರ್ 2021, 3:08 IST
ಶಿರಸಿಯ ಮಾರಿಕಾಂಬಾ ದೇವಸ್ಥಾನ
ಶಿರಸಿಯ ಮಾರಿಕಾಂಬಾ ದೇವಸ್ಥಾನ   

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ನಡೆಯಬೇಕಿದ್ದ ನವರಾತ್ರಿಯ ಸಾಂಸ್ಕೃತಿಕ ಉತ್ಸವ ಸಡಗರವನ್ನು ಕಳೆದ ವರ್ಷ ಕೋವಿಡ್ ಕಸಿದಿತ್ತು. ಸದ್ಯ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸರಳ ಉತ್ಸವ ಆಚರಣೆಗೆ ಮುಂದಾಗಿದ್ದು ಭಕ್ತ ವಲಯದ ಅಪಸ್ವರಕ್ಕೆ ಕಾರಣವಾಗಿದೆ.

ಅ.7 ರಿಂದ 15ರ ವರೆಗೆ ನಡೆಯಲಿರುವ ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಸರಳ ಧಾರ್ಮಿಕ ಆಚರಣೆಗೆ ನಿರ್ಧರಿಸಲಾಗಿದೆ. ಪಾರಾಯಣ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಆದರೆ ಭಕ್ತರಿಗೆ ಪೂಜೆಗೆ ಕುಳಿತುಕೊಳ್ಳಲು ಅವಕಾಶ ನೀಡುತ್ತಿಲ್ಲ ಎನ್ನುತ್ತಿದೆ ದೇವಸ್ಥಾನದ ಆಡಳಿತ ವರ್ಗ.

ದೇವಿ ಸನ್ನಿಧಿಯಲ್ಲಿ ನಡೆಯಬೇಕಿದ್ದ ನೃತ್ಯ, ಗಾಯನ, ವಾದನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ಧರ್ಮದರ್ಶಿ ಮಂಡಳಿ ನಿರ್ಧರಿಸಿದೆ. ಉತ್ಸವದ ವೇಳೆ ನಡೆಯುತ್ತಿದ್ದ ಸ್ಪರ್ಧೆಗಳನ್ನು ಕೈಬಿಡಲಾಗಿದೆ.

ADVERTISEMENT

‘ಸರಳ ರೀತಿಯಲ್ಲಿ ಉತ್ಸವ ಆಚರಿಸಿ ಎಂದು ಜಿಲ್ಲಾಧಿಕಾರಿ ಪತ್ರದ ಮೂಲಕ ಸೂಚಿಸಿದ್ದಕ್ಕೆ ವಿಜೃಂಭಣೆಯ ಆಚರಣೆ ಮಾಡುತ್ತಿಲ್ಲ’ ಎಂದು ದೇವಸ್ಥಾನದ ಬಾಬುದಾರರೊಬ್ಬರು ಹೇಳಿದರು.

‘ಕೋವಿಡ್ ಆತಂಕದಿಂದ ಸರಳ ರೀತಿಯಲ್ಲಿ ನವರಾತ್ರಿ ಉತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಉಳಿದ ಧಾರ್ಮಿಕ ಕಾರ್ಯಕ್ರಮಗಳು ಚಾಚೂತಪ್ಪದೆ ನಡೆಯುತ್ತವೆ. ಜಿಲ್ಲಾಧಿಕಾರಿ ಸೂಚನೆಯಂತೆ ನಿಯಮ ಪಾಲಿಸುವ ಜವಾಬ್ದಾರಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ಪ್ರತಿಕ್ರಿಯಿಸಿದರು.

‘ಕೋವಿಡ್ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಶಾಲೆ, ಕಾಲೇಜುಗಳನ್ನು ಆರಂಭಿಸಿದೆ. ಸಮಾವೇಶ, ಸಮಾರಂಭಗಳು ಹಲವೆಡೆ ನಡೆಯುತ್ತಿವೆ. ಗಣೇಶ ಚತುರ್ಥಿಗೂ ಅವಕಾಶ ನೀಡಲಾಗಿತ್ತು. ಆದರೆ ನವರಾತ್ರಿ ಸರಳವಾಗಿ ಆಚರಿಸಿ ಎಂದು ನಿಯಮ ಹೇರಿಕೆ ಮಾಡುವುದೇಕೆ’ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಪ್ರಶ್ನಿಸಿದರು.

‘ಬೇರೆ ಬೇರೆ ದೇವಾಲಯಗಳಲ್ಲಿ ನವರಾತ್ರಿ ಅದ್ದೂರಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿನ ಪ್ರಸಿದ್ಧ ದೇವಸ್ಥಾನ ಎಂಬ ಖ್ಯಾತಿ ಇರುವ ಇಲ್ಲಿ ಅನಾದಿ ಕಾಲದಿಂದ ನಡೆದುಕೊಂಡ ಬಂದಿದ್ದ ಪದ್ಧತಿ ಕೈಬಿಟ್ಟು ಸರಳ ಆಚರಣೆಗೆ ನಿರ್ಧರಿಸಿದ ಧರ್ಮದರ್ಶಿ ಮಂಡಳಿಯ ಕ್ರಮ ಸರಿಯಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.