ಶಿರಸಿ: ‘ಲೋಕಸಭೆ ಚುನಾವಣೆಯಲ್ಲಿ ಸೀಟು ಕಳೆದುಕೊಂಡಾಗಲೇ ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಗೌರವ ಆದರೂ ಉಳಿಯುತ್ತಿತ್ತು. ಈಗ ಉಪಚುನಾವಣೆಯಲ್ಲಿ ಸೋಲು ಕಂಡ ಮೇಲಾದರೂ ರಾಜೀನಾಮೆ ನೀಡಿದ್ದು ಸ್ವಾಗತಾರ್ಹ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಗೋಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರಿಗೆ ಬಿಜೆಪಿಗೆ ಅಧಿಕಾರ ಕೊಡುವ ಮನಸ್ಸಿತ್ತು. ಕಳೆದ ವಿಧಾನಸಭೆ ವೇಳೆಗೆ ಇದ್ದ ಜನರ ಅಪೇಕ್ಷೆ, ಉಪಚುನಾವಣೆ ಮೂಲಕ ಈಡೇರಿದಂತಾಗಿದೆ. ಬಿಜೆಪಿ ಸುಭದ್ರ ಸರ್ಕಾರ ನಡೆಸಲಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು, ಸ್ಥಿರ ಸರ್ಕಾರದ ಜನರ ಅಪೇಕ್ಷೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ, ಪಕ್ಷಕ್ಕೆ ಬಂದು ಸ್ಪರ್ಧಿಸಿದ ಅಭ್ಯರ್ಥಿಗಳ ಪ್ರಭಾವ ಈ ನಾಲ್ಕು ಅಂಶಗಳು ಗೆಲುವಿಗೆ ಸಹಕಾರಿಯಾದವು’ ಎಂದರು.
’ಕಾಂಗ್ರೆಸ್, ಜೆಡಿಎಸ್ನಲ್ಲಿ ಏಕತೆ ಇರಲಿಲ್ಲ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ, ಪರಮೇಶ್ವರ ಒಂದೊಂದು ದಿಕ್ಕಿಗೆ ಮುಖ ಮಾಡಿಕೊಂಡಿದ್ದರು. ಹೀಗಾಗಿ ಇವೆರಡೂ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ’ ಎಂದು ಹೇಳಿದರು. ‘ಬಿಜೆಪಿ ಈಗ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ. ಗೋ ಹತ್ಯೆ ನಿಷೇಧ ಜಾರಿಗೊಳಿಸಲು ಸರ್ಕಾರ ಕ್ರಮವಹಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.