ದಾಂಡೇಲಿ: ‘ಅಂಗನವಾಡಿಗಳಿಗೆ ಬರುವವರು ಬಡವರ ಮಕ್ಕಳಾಗಿರುತ್ತಾರೆ. ಇವರಿಗೆ ಖಾಸಗಿ ಅಂಗನವಾಡಿಯಲ್ಲಿ ಸಿಗುವ ಎಲ್ಲಾ ಉನ್ನತ ದರ್ಜೆಯ ಸೌಲಭ್ಯಗಳನ್ನು ಸರ್ಕಾರಿ ಅಂಗನವಾಡಿಯಲ್ಲಿ ಸಿಗುವಂತೆ ಮಾಡುವುದು ನನ್ನ ಉದ್ದೇಶವಾಗಿದೆ’ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಲೋಕೋಪಯೋಗಿ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ
ನಗರಸಭೆ ವ್ಯಾಪ್ತಿ ವಾರ್ಡ್ ನಂಬರ್ 19ರ ಟೌನ್ಶಿಪ್ -1 ರಲ್ಲಿ 14 ನೇ ಹಣಕಾಸಿನ ಯೋಜನೆಯಲ್ಲಿ ₹ 10 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ದಾಂಡೇಲಿ ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೆ ಸ್ವತಃ ಕಟ್ಟಡಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ಹೊರತು ಪಡಿಸಿದರೆ ಉಳಿದಂತೆ ನಾನು ಸದಾ ಜನರೊಂದಿಗೆ ಇದ್ದೇ ಇರುತ್ತೇನೆ ಎಂದರು.
ಹಳಿಯಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿ ದೇವಿ ಸ್ವಾಗತಿಸಿದರು. ಹಿಟಾಚಿ ಕಂಪನಿಯ ಉದ್ಯಮಿ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ ದಿಕ್ಷತ್ ಅವರು ನೀಡಿರುವ ಮಕ್ಕಳ ಕಲಿಕಾ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು.
ನಗರಸಭೆಯ ಉಪಾಧ್ಯಕ್ಷ ಸಂಜಯ ನಂದ್ಯಾಳಕ, ಪೌರಾಯುಕ್ತರ ರಾಜಾರಾಮ ಪವಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಹಾಲಮ್ಮನ್ನವರ, ಬಾಂಬೆಚಾಳ್ ನಗರಸಭೆ ಸದಸ್ಯ ದಶರಥ ಬಂಡಿವಡ್ಡರ, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ವಿ ಹೆಗಡೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಎಲ್ಲ ಸದಸ್ಯರುಗಳು ವೇದಿಕೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.