ADVERTISEMENT

ಕುಮಟಾ: ರಸಗೊಬ್ಬರ ಚಿಲ್ಲರೆ ಖರೀದಿಗೆ ಕಿರಿ ಕಿರಿ

ಪಹಣಿ, ಆಧಾರ್ ಮಾಹಿತಿ ಕಡ್ಡಾಯ: ಪೌಸ್ ಯಂತ್ರ ಅಳವಡಿಕೆ ಅನಿವಾರ್ಯ

ಎಂ.ಜಿ.ನಾಯ್ಕ
Published 5 ಜುಲೈ 2025, 5:31 IST
Last Updated 5 ಜುಲೈ 2025, 5:31 IST
ಕುಮಟಾದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ
ಕುಮಟಾದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ   

ಕುಮಟಾ: ರಸ ಗೊಬ್ಬರ ಖರೀದಿಗೆ ಪಹಣಿ ಹಾಗೂ ಆಧಾರ್ ಮಾಹಿತಿ ಕಡ್ಡಾಯ ಮಾಡಿರುವ ನಿಯಮದಿಂದಾಗಿ ಮಾರುಕಟ್ಟೆಯಲ್ಲಿ ಗೊಬ್ಬರದ ಚಿಲ್ಲರೆ ಮಾರಾಟ, ಖರೀದಿಗೆ ಸಮಸ್ಯೆಯಾಗಿದೆ.

ಬೆಳೆ ನಾಟಿ ಸಂದರ್ಭದಲ್ಲಿ ಅಧಿಕ ಗೊಬ್ಬರದ ಅಗತ್ಯವಿರುವ ಕಾರಣ ರೈತರು ಈ ಸಂದರ್ಭದಲ್ಲಿ ಖರೀದಿಸುವುದು ಹೆಚ್ಚು. ನಾಟಿಯಾದ ಬಳಿಕ ತಿಂಗಳು ಬಿಟ್ಟು ಮೇಲುಗೊಬ್ಬರ ಕೊಡಲು ಇನ್ನೊಮ್ಮೆ ಖರೀದಿ ಮಾಡಬೇಕಾಗುತ್ತದೆ. ಆಗ, ಅಧಿಕ ಪ್ರಮಾಣದ ಗೊಬ್ಬರದ ಅಗತ್ಯವಿಲ್ಲದ ಕಾರಣ ಕಡಿಮೆ ಪ್ರಮಾಣದ ಗೊಬ್ಬರ ಖರೀದಿಗೆ ರೈತರು ಮುಂದಾಗುತ್ತಾರೆ. ಹೀಗೆ ಅಲ್ಪ ಪ್ರಮಾಣದ ಖರೀದಿಗೂ ಪಹಣಿ, ಆಧಾರ್ ಮಾಹಿತಿ ನೀಡುವುದರ ಜೊತೆಗೆ ಖರೀದಿ ಮಳಿಗೆಯಲ್ಲಿ ರೈತರು ತಮ್ಮ ಬಯೋ ಮೆಟ್ರಿಕ್ ಮಾಹಿತಿಯನ್ನೂ ನೀಡಬೇಕಾಗುತ್ತಿದೆ.

‘ಪರವಾನಗಿ ಹೊಂದಿರುವ ಪ್ರತಿ ರಾಸಾಯನಿಕ ಗೊಬ್ಬರ ಮಳಿಗೆಯವರೂ ಪೌಸ್ ಯಂತ್ರವನ್ನು (ಪಾಯಿಂಟ್ ಆಫ್ ಸೇಲ್) ಖರೀದಿ ಮಾಡಿ ಇಟ್ಟುಕೊಳ್ಳುವುದು ಕಡ್ಡಾಯ. ಅವುಗಳಿಂದ ಗೊಬ್ಬರ ಮಾರಾಟ ಮಾಹಿತಿ ದಾಖಲಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.

ADVERTISEMENT

‘ಕೃಷಿ ಕೂಲಿಕಾರರ ಬಳಿ, ಟೆರೇಸ್ ಗಾರ್ಡನ್ ಮಾಡಿಕೊಂಡ ಪಟ್ಟಣ ನಿವಾಸಿಗಳ ಬಳಿ ಕೃಷಿ ಭೂಮಿಯ ಪಹಣಿ ಇರುವುದಿಲ್ಲ. ಅಂಥವರು ಗೊಬ್ಬರ ಖರೀದಿಗೆ ಬಂದಾಗ ಮಾರಾಟ ಮಾಡುವುದು ಕಷ್ಟಕರವಾಗುತ್ತದೆ. ಇಂಟರ್‌ನೆಟ್ ಕೈಕೊಟ್ಟು ಸರ್ವರ್ ಡೌನ್ ಆದ ಸಂದರ್ಭದಲ್ಲಿ ಪೌಸ್ ಯಂತ್ರ ಸರಿಯಾಗಿ ಕೆಲಸ ಮಾಡದೆ ಸಂಸ್ಥೆಯ ಮಾರಾಟ ದಾಖಲಾತಿ ಹಾಗೂ ನಿಜ ಗೊಬ್ಬರ ಸರಕಿನ ನಡುವೆ ಸ್ವಲ್ಪವಾದರೂ ವ್ಯತ್ಯಾಸ ಉಂಟಾಗುತ್ತದೆ. ಇಂತಹ ಸಮಸ್ಯೆಯಿಂದ ವ್ಯಾಪಾರಿಗಳು, ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಭಾಗ್ವತ ಹೇಳಿದರು.

ನಿಯಮ ಸರಳೀಕರಿಸಲಿ

‘ಮಳೆಗಾಲದ ತೇವಾಂಶಕ್ಕೆ ವಿಶೇಷವಾಗಿ ಯೂರಿಯಾದಂಥ ಗೊಬ್ಬರ ಕರಗಿ ಹೋಗುವುದರಿಂದಲೂ ನೈಜ ಸರಕಿನಲ್ಲಿ ವ್ಯತಾಸ ಕಂಡು ಬರುತ್ತದೆ. ಕೃಷಿ ಇಲಾಖೆ ಅಧಿಕಾರಿಗಳು ಇದನ್ನೇ ನೆಪವಾಗಿಟ್ಟು ಆಕ್ಷೇಪಿಸುತ್ತಾರೆ. ಇಂಥ ತಾಂತ್ರಿಕ ಸಮಸ್ಯೆಗಳ ನಡುವೆಯೂ ಸಂಸ್ಥೆ ರೈತರಿಗೆ ಅಗತ್ಯವಿರುವ ಸುಮಾರು 20 ರೀತಿಯ ಗೊಬ್ಬರ ಹಾಗೂ ಕೀಟ ನಾಶಕ ಮುಂತಾದವನ್ನು ಮಾರಾಟ ಮಾಡುತ್ತಿದೆ. ಕೃಷಿ ಇಲಾಖೆ ಸಣ್ಣ ರೈತರಿಗೆ ಗೊಬ್ಬರ ಕೀಟ ನಾಶಕ ಕೃಷಿ ಉಪಕರಣ ಮಾರಾಟ ಮಾಡುವಲ್ಲಿ ನಿಯಮ ಇನ್ನಷ್ಟು ಸರಳಗೊಳಿಸಬೇಕು’ ಎನ್ನುತ್ತಾರೆ ತಾಲ್ಲೂಕು ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಭಾಗ್ವತ.

ಕೃಷಿ ಬಳಕೆಗೆ ಮೀಸಲಿಟ್ಟ ರಸಗೊಬ್ಬರವನ್ನು ಖರೀದಿ ಮಾಡಿ ಕೈಗಾರಿಕೆಗಳಿಗೆ ದುರ್ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಮಾರಾಟದ ಮೇಲೆ ನಿಯಂತ್ರಣ ತರಲು‌ ಕಠಿಣ ನಿಯಮ ಜಾರಿಗೆ ತರಲಾಗಿದೆ.
-ವೆಂಕಟೇಶಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.