ADVERTISEMENT

ಟಿಬೆಟನ್ ಕ್ಯಾಂಪ್: ವಿದೇಶಿ ಯಾತ್ರಿಗಳ ಸಂಖ್ಯೆಯಲ್ಲಿ ಇಳಿಮುಖ

ದಲೈಲಾಮಾ ಮೂರು ದಿನಗಳ ಬೋಧನೆ, ಪೂಜಾ ಕಾರ್ಯಕ್ರಮ ರದ್ದು

ಶಾಂತೇಶ ಬೆನಕನಕೊಪ್ಪ
Published 13 ಡಿಸೆಂಬರ್ 2019, 19:45 IST
Last Updated 13 ಡಿಸೆಂಬರ್ 2019, 19:45 IST
ಮುಂಡಗೋಡದ ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದ ರಸ್ತೆ ಬದಿಯಲ್ಲಿ ಧಾರ್ಮಿಕ ಪರಿಕರಗಳ ಅಂಗಡಿ ತೆರೆದಿರುವುದು
ಮುಂಡಗೋಡದ ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದ ರಸ್ತೆ ಬದಿಯಲ್ಲಿ ಧಾರ್ಮಿಕ ಪರಿಕರಗಳ ಅಂಗಡಿ ತೆರೆದಿರುವುದು   

ಮುಂಡಗೋಡ: ಟಿಬೆಟನ್ ಧರ್ಮಗುರು ದಲೈಲಾಮಾ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ, ಕೆಲವು ಪೂರ್ವನಿಗದಿತ ಪೂಜಾ ಕಾರ್ಯಕ್ರಮಗಳು ರದ್ದಾಗಿರುವುದುಬಿಕ್ಕುಗಳಿಗೆನಿರಾಸೆ ಮೂಡಿಸಿದೆ. ಧಾರ್ಮಿಕ ಪರಿಕರ, ಉಣ್ಣೆಬಟ್ಟೆ ವ್ಯಾಪಾರಸ್ಥರ ಮೇಲೂ ಇದು ಪರಿಣಾಮ ಬೀರಿದೆ.

ಲಾಮಾ ಕ್ಯಾಂಪ್‌ ನಂ.2ರ ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದಲ್ಲಿ ದಲೈಲಾಮಾ ಅವರ ಮೂರು ದಿನಗಳ ಬೋಧನೆ ಹಾಗೂ ಪೂಜಾ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ.ಕೊನೆಯ ಹಂತದ ಸಿದ್ಧತೆಯಲ್ಲಿದ್ದ ಬೌದ್ಧ ಮುಖಂಡರು,ತಮ್ಮ ಧರ್ಮಗುರುವಿನ ಬೋಧನೆಕೇಳುವ ಅವಕಾಶ ವಂಚಿತರಾಗಬೇಕಾಯಿತು ಎಂದು ತಿಳಿದುಬಂದಿದೆ.

‘ದಲೈಲಾಮಾ ಕಾರ್ಯಕ್ರಮದಲ್ಲಿ ಅಮೆರಿಕ, ಭೂತಾನ್, ನೇಪಾಳ, ಕೊರಿಯಾ, ಮಂಗೋಲಿಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಈ ಸಲ ವಿದೇಶಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ದಲೈಲಾಮಾ ಅವರ ಪೂಜಾ ಕಾರ್ಯಕ್ರಮ ರದ್ದಾಗಿರುವುದೇವಿದೇಶಿಗರ ಸಂಖ್ಯೆ ಕಡಿಮೆ ಆಗಲು ಕಾರಣ ಆಗಿದೆ’ ಎನ್ನುತ್ತಾರೆ ಬೌದ್ಧ ಮುಖಂಡ ಕರ್ಮಾ ಯಾಂಗಡುಪ್.

ADVERTISEMENT

ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದ ಸುತ್ತಮುತ್ತ ಟಿಬೆಟನ್‌ರ ಕಲೆ, ಸಂಸ್ಕೃತಿ ಬಿಂಬಿಸುವ ಪರಿಕರಗಳನ್ನು ಮಾರಲು ಬಿಹಾರ, ಹಿಮಾಚಲ ಪ್ರದೇಶದಿಂದ ವ್ಯಾಪಾರಸ್ಥರು ಬಂದಿದ್ದಾರೆ. ಗ್ರಾಹಕರು ಇಲ್ಲದೇ ಅವರೂ ನಷ್ಟ ಅನುಭವಿಸುತ್ತಿದ್ದಾರೆ.

‘ಧ್ಯಾನ ಮಾಡಲು ಬೇಕಾಗಿರುವ ಜಪಮಾಲೆಗಳು, ಬುದ್ಧನ ಸಣ್ಣ ಮೂರ್ತಿಗಳು, ಶಂಖ ಸೇರಿದಂತೆ ಬಿಕ್ಕುಗಳ ಜೀವನದಲ್ಲಿ ಹಾಸುಹೊಕ್ಕಿರುವ ಪೂಜಾ ಸಾಮಗ್ರಿಯನ್ನು ಮಾರಲು ಬಂದಿದ್ದೇವೆ. ಆದರೆ, ಹೇಳಿಕೊಳ್ಳುವಂತಹ ವ್ಯಾಪಾರ ಇಲ್ಲ’ ಎನ್ನುತ್ತಾರೆ ಬೋಧಗಯಾದಿಂದ ಬಂದಿರುವ ರಾಕೇಶ ಸಿಂಗ್.

‘ದಲೈಲಾಮಾ ಅವರ ಕಾರ್ಯಕ್ರಮ ಇರುವ ಕಡೆಗಳಲ್ಲಿ ಹೋಗಿ ವ್ಯಾಪಾರ ನಡೆಸುತ್ತೇವೆ. ಬೋಧಗಯಾ, ಬನಾರಸ್‌ದಿಂದ 25ಕ್ಕಿಂತ ಹೆಚ್ಚಿನ ಜನರು ಬಂದಿದ್ದೇವೆ. ಇಲ್ಲಿ ರಸ್ತೆ ಬದಿಯಲ್ಲಿ ಅಂಗಡಿ ತೆರೆಯಲು ಸಮಸ್ಯೆ ಇದೆ’ ಎಂದು ರಾಹುಲ್ ಹೇಳಿದರು.

ಹಲವರಿಗೆ ಸಿಗದ ‘ಪಿ.ಎ.ಪಿ’: ‘ನಿರ್ಬಂಧಿತ ಪ್ರದೇಶದ ಪರವಾನಿಗೆ (ಪಿ.ಎ.ಪಿ) ಪಡೆದ ವಿದೇಶಿಗರು ಮಾತ್ರ ದಲೈಲಾಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಹಲವು ವಿದೇಶಿ ಅನುಯಾಯಿಗಳಿಗೆ ಈ ಸಲ ಪಿ.ಎ.ಪಿ ಸಿಗದಿರುವುದು, ಪ್ರವಾಸಿಗರು ಕಡಿಮೆ ಬರಲು ಕಾರಣವಾಗಿದೆ. ಬೋಧಗಯಾ, ಧರ್ಮಶಾಲಾ ಸೇರಿದಂತೆ ವಿವಿಧೆಡೆಪಿ.ಎ.ಪಿ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲಿ ದಲೈಲಾಮಾ ಅವರ ಬೋಧನೆ, ಪೂಜಾ ಕಾರ್ಯಕ್ರಮಗಳಲ್ಲಿ ವಿದೇಶಿ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ’ ಎಂದುಬೌದ್ಧ ಮುಖಂಡ ಕರ್ಮಾ ಯಾಂಗಡುಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.