
ಸಿದ್ದಾಪುರ: ತಾಲ್ಲೂಕಿನ ಬಿಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ರೈತರೊಬ್ಬರ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದ ಘಟನೆ ಮಂಗಳವಾರ ನಡೆದಿದೆ.
ಕ್ಯಾದಗಿ ಅರಣ್ಯ ವಲಯದ ಬಿಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಕೈ ನಿವಾಸಿ ಗಣೇಶ ವೆಂಕಟ್ರಮಣ ಹೆಗಡೆ ಎಂಬುವವರಿಗೆ ಸೇರಿದ ತೋಟದಲ್ಲಿ ಅರಣ್ಯ ಇಲಾಖೆ ಈ ತೆರವು ಕಾರ್ಯಾಚರಣೆ ನಡೆಸಿದೆ. ಸುಮಾರು 1980 ಕ್ಕಿಂತ ಮೊದಲಿನಿಂದಲೂ ಸಾಗುವಳಿ ಇದ್ದ ಅತಿಕ್ರಮಣ ಜಾಗದಲ್ಲಿ ಹಾಗೂ 30-35 ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದ ಅಡಿಕೆ ಮರಗಳನ್ನು ಕಡಿಯಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮರ ಕಡಿಯುವ ಕಾರ್ಮಿಕರು 20 ರಿಂದ 25 ಮಂದಿ ಏಕಾಏಕಿ ಆಗಮಿಸಿ, ಫಲ ನೀಡುತ್ತಿದ್ದ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕತ್ತರಿಸಿ ಹಾಕಿದ್ದಾರೆ.
ಈ ಜಮೀನಿನಲ್ಲಿ 1975ಕ್ಕೂ ಮೊದಲಿನಿಂದ, ಅಂದರೆ ತಮ್ಮ ಅಜ್ಜನ ಕಾಲದಿಂದಲೂ ಕೃಷಿ ಮಾಡಿಕೊಂಡು ಬರಲಾಗುತ್ತಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿದೆ. ಮೂರೂವರೆ ದಶಕಗಳಿಂದ ಅತ್ಯಂತ ಕಷ್ಟಪಟ್ಟು ಬೆಳೆಸಿದ್ದ, ಫಸಲು ನೀಡುತ್ತಿದ್ದ ಮರಗಳನ್ನು ಕಣ್ಣೆದುರೇ ಕಡಿದು ಹಾಕಿರುವುದು ರೈತ ಕುಟುಂಬವನ್ನು ಚಿಂತೆಗೀಡು ಮಾಡಿದೆ.
ಈ ಹಿಂದೆ ಅತಿಕ್ರಮಣ ತೆರವು ಗೊಳಿಸುವಂತೆ ನೋಟಿಸ್ ಕೂಡ ನೀಡಲಾಗಿತ್ತು ಎನ್ನಲಾಗಿದೆ. ಅರಣ್ಯ ಭೂಮಿ ಅತಿಕ್ರಮಣ ತೆರವು ಹೆಸರಿನಲ್ಲಿ ನಡೆದಿರುವ ಈ ಕಾರ್ಯಾಚರಣೆ ಬಗ್ಗೆ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.