
ಕಾರವಾರ: ‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಗಳು ದಾಖಲಾತಿ ಅಲಭ್ಯತೆ ಕಾರಣಕ್ಕೆ ತಿರಸ್ಕರಿಸಿದ್ದಲ್ಲಿ ಸ್ಥಳ ಮಹಜರು ನಡೆಸಿ, ನೀಡುವ ವರದಿಯನ್ನು ದಾಖಲೆಯಾಗಿ ಸ್ವೀಕರಿಸಲು ಅರಣ್ಯ ಹಕ್ಕು ಕಾಯ್ದೆಯ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಕೈಗೊಂಡ ನಿರ್ಣಯ ಗಮನಾರ್ಹ ನಡೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಮಿತಿ ಸಭೆಯು ಕೈಗೊಂಡ ನಿರ್ಣಯದಂತೆ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ ಮುಂದಿನ 45 ದಿನಗಳೊಳಗಾಗಿ ಅರ್ಜಿ ತಿರಸ್ಕೃತಗೊಂಡವರ ಜಾಗಗಳ ಮಹಜರು ನಡೆಸಲು ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಅರಣ್ಯ ಹಕ್ಕು ಕಾಯ್ದೆ ಅಡಿ ರಾಜ್ಯದಲ್ಲಿ 2,95,176 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 2,62,595 ಅರ್ಜಿಗಳು ತಿರಸ್ಕೃತಗೊಂಡಿವೆ. ಅವುಗಳ ಪೈಕಿ ಮೂರು ತಲೆಮಾರಿನ ನಿರ್ದಿಷ್ಟ ದಾಖಲೆ ಇಲ್ಲದೇ ಇರುವುದರಿಂದ ತಿರಸ್ಕೃತಗೊಂಡ ಅರ್ಜಿಗಳೇ ಹೆಚ್ಚಿವೆ. ಹೀಗಾಗಿ, ಸದ್ಯ ಸಮಿತಿ ಕೈಗೊಂಡ ನಿರ್ಧಾರದಂತೆ ಜಂಟಿ ಮಹಜರು ವರದಿಯೂ ದಾಖಲೆಗಳಾಗಿ ಪರಿಗಣಿಸಲು ಸೂಚಿಸಿರುವುದು ಮಹತ್ವದ ತೀರ್ಮಾನ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.