ಕಾರವಾರ: ಜಿಲ್ಲೆಯ ಮನೆಗಳಲ್ಲಿ ಶನಿವಾರ ಮತ್ತು ಭಾನುವಾರ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಸಂಪ್ರದಾಯದಂತೆ ಪ್ರತಿಷ್ಠಾಪಿಸಿದ್ದ ವಿಗ್ರಹಗಳನ್ನು ಪೂಜಿಸಿ ಭಾನುವಾರ ವಿಸರ್ಜನೆ ಮಾಡಿದರು.
ಕೊರೊನಾ ನಿಯಂತ್ರಣದ ನಿಯಮಗಳು ಜಾರಿಯಲ್ಲಿರುವ ಕಾರಣ ಬಾರಿ ಸಾರ್ವಜನಿಕ ಗಣೇಶೋತ್ಸವಗಳು ಅತ್ಯಂತ ಸರಳವಾಗಿ ನೆರವೇರಿದವು. ಭಜನೆ, ಸಂಗೀತೋತ್ಸವಗಳು, ಮೂರ್ತಿಗಳ ಮೆರವಣಿಗೆಗೆ ಅವಕಾಶ ಇಲ್ಲದ ಕಾರಣ ಹಬ್ಬದ ಸದ್ದುಗದ್ದಲ ಇರಲಿಲ್ಲ. ಹಬ್ಬದೂಟ, ಮೋದಕ, ಚಕ್ಕುಲಿ, ಪಂಚಕಜ್ಜಾಯ ಮುಂತಾದ ಭಕ್ಷ್ಯಗಳಿಗೇ ಹಬ್ಬ ಸೀಮಿತವಾಯಿತು.
ನಗರದಲ್ಲಿ ಆ.21ರಂದು ಸಂಜೆ ಮತ್ತು ಆ.22ರಂದು ಬೆಳಿಗ್ಗೆ ಗಣಪತಿ ವಿಗ್ರಹಗಳನ್ನು ಸಂಪ್ರದಾಯದಂತೆ ತೆಗೆದುಕೊಂಡು ಬಂದು ಮನೆಗಳಲ್ಲಿ ಪ್ರತಿಷ್ಠಾಪಿಸಿದರು. ಈ ಬಾರಿ ಸಣ್ಣ ವಿಗ್ರಹಗಳಿಗೆ ಆದ್ಯತೆ ನೀಡಿದ್ದು ಕಂಡುಬಂತು. ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಮೆರವಣಿಗೆಗಳಲ್ಲಿ ಗಣಪನನ್ನು ಕರೆದುಕೊಂಡು ಬರಲು ಅವಕಾಶ ಇರಲಿಲ್ಲ. ಹಾಗಾಗಿ ಮನೆಯ ಹಾಗೂ ಉತ್ಸವ ಸಮಿತಿಗಳ ಕೆಲವೇ ಮಂದಿ ವಿಗ್ರಹಗಳನ್ನು ಹಿಡಿದುಕೊಂಡು ನಡೆದು ಹೋಗುತ್ತಿದ್ದರು.
ಕಾರವಾರದ ಮಾರುತಿ ಮಂದಿರ, ಕಾಜುಬಾಗ, ಕೋಡಿಬಾಗ, ಆಟೊ ನಿಲ್ದಾಣ ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದವು. ನಗರದ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಗಳಲ್ಲೂ ಪೊಲೀಸ್ ಸಿಬ್ಬಂದಿ ಸಂಭ್ರಮದಿಂದ ಗಣಪತಿಯನ್ನು ಪೂಜಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಸಿ.ಪಿ.ಐ ಸಂತೋಷ ಕುಮಾರ್, ಪಿ.ಎಸ್.ಐ ಸಂತೋಷ್ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಗ್ರಹಗಳಿಗೆ ಪೂಜೆಯ ಸಂದರ್ಭದಲ್ಲಿ ಚರ್ಮವಾದ್ಯ ಗುಮಟೆಪಾಂಗ್, ತಾಳ ನುಡಿಸಲಾಯಿತು. ಜೊತೆಗೇ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಪುರೋಹಿತರು ಭಾನುವಾರ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದ ಬಳಿಕ ವಿಗ್ರಹವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ಈ ವೇಳೆ, ‘ಗಣಪತಿ ಬಪ್ಪಾ ಮೋರೆಯಾ’, ‘ಗಣಪತಿ ಮಹಾರಾಜ್ ಕೀ ಜೈ’ ಘೋಷಣೆಗಳು ಮೊಳಗಿದವು.
ರಸ್ತೆ, ಮಾರುಕಟ್ಟೆ ಖಾಲಿ:ವಿನಾಯಕ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ನಿಯಮವನ್ನು ಕಾರವಾರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಆ.22ರಂದು ಸಂಜೆಯ ವೇಳೆಗೆ ಬಹುಪಾಲು ನಾಗರಿಕರು ಮನೆ ಸೇರಿಕೊಂಡಿದ್ದರು. ರಸ್ತೆಗಳು, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಖಾಲಿ ಖಾಲಿಯಾಗಿದ್ದವು. ಚಂದ್ರಾಸ್ತವಾದ ಬಳಿಕವೇ (ರಾತ್ರಿ 9.41) ಮನೆಗಳಿಂದ ಹೊರ ಬಂದು ಸಂಪ್ರದಾಯ ಪಾಲನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.