
ಗೋಕರ್ಣ: ಗೋಕರ್ಣ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದ ಕ್ಷೇತ್ರ. ಅದರಲ್ಲಿಯೂ ಇಲ್ಲಿಯ ಸಮುದ್ರ ತೀರ ಎಲ್ಲರ ಅಕರ್ಷಣೆಗೆ ಒಳಗಾಗಿದೆ. ಇಂತಹಃ ಸಮುದ್ರ ತೀರವನ್ನು ಸ್ವಚ್ಛವಾಗಿಡುವುದು ಸ್ಥಳೀಯರ ಕರ್ತವ್ಯವಾಗಿದೆ. ಕ್ಷೇತ್ರದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯ ನೀಡಬೇಕಾಗಿದೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಸಲಹೆ ನೀಡಿದರು.
ಶನಿವಾರ ಕನಕದಾಸ ಜಯಂತಿ ನಿಮಿತ್ತ ಗೊಕರ್ಣ ಗ್ರಾಮ ಪಂಚಾಯಿತಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
’ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮೆಲ್ಲರ ಹೊಣೆ. ಈಗಾಗಲೇ ಗೋಕರ್ಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಲಾಗಿದೆ. ಆದರೆ ಆ ಆದೇಶ ಕಾಗದದಲ್ಲಿ ಮಾತ್ರ ಇದೆ. ಬಳಕೆಯಲ್ಲಿಲ್ಲ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯಗಳೇ ಕಾಣುತ್ತಿವೆ. ಇದರಿಂದ ಕ್ಷೇತ್ರಕ್ಕೂ ಸ್ವಚ್ಛತೆಯ ವಿಷಯದಲ್ಲಿ ಕೆಟ್ಟ ಹೆಸರು ಬರುತ್ತಿದೆ. ಅದರಲ್ಲೂ ವಿದೇಶಿಯರು ಇಲ್ಲಿಯ ತ್ಯಾಜ್ಯದ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಟೀಕಿಸುತ್ತಿದ್ದಾರೆ. ಇದರಿಂದ ಕ್ಷೇತ್ರದ ಸ್ವಚ್ಛತೆಗೆ ನಾವೆಲ್ಲರೂ ಹೆಚ್ಚಿನ ಪ್ರಾಶಸ್ತ್ಯಕೊಟ್ಟು ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತ ಪರಿಸರವನ್ನಾಗಿ ಮಾಡೋಣ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್, ಬಿಜೆಪಿ ಪ್ರಮುಖ ಮಹೇಶ ಶೆಟ್ಟಿ, ಕಾರವಾರ ಪಹರೇ ವೇದಿಕೆಯ ಪ್ರಮುಖ ನಾಗರಾಜ ನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಹನೇಹಳ್ಳಿ, ಸದಸ್ಯರಾದ ಅನೀಲ್ ಶೇಟ್, ಎನ್.ಎಸ್,ಲಮಾಣಿ, ಹನೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಣ್ಣು ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಶೆಟ್ಟಿ, ಪ್ರಭಾಕರ ಪ್ರಸಾದ, ಸತೀಶ ದೇಶಭಂಡಾರಿ, ಮೋಹನ ಮೂಡಂಗಿ, ರಾಜೇಶ ನಾಯಕ ಮುಂತಾದವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.