
ಗೋಕರ್ಣ: ಮುಂಬೈ ಮೂಲದ ಸಾಹಿತಿ ಶ್ರೀಪಾದ ಕಾಣೇಕರ್ ಸಂಗ್ರಹಿಸಿ ಮುದ್ರಿಸಿದ, ಪವಿತ್ರ ಕ್ಷೇತ್ರ ಗೋಕರ್ಣದ ಪುರಾಣ ಸೇರಿದಂತೆ ಇಲ್ಲಿರುವ ಪ್ರಾಚೀನ ಶಿವಲಿಂಗಗಳು ಮತ್ತು ತೀರ್ಥಕುಂಡಗಳ ಕುರಿತು ಸಮಗ್ರ ಮಾಹಿತಿಗಳನ್ನು ಒಳಗೊಂಡ ವಿಶೇಷ ಸಂಗ್ರಹ ಗ್ರಂಥ ಗೋಕರ್ಣ ಪುರಾಣವನ್ನು ಈಚೆಗೆ ಮಹಾಬಲೇಶ್ವರನ ಸನ್ನಿಧಿಯಲ್ಲಿ ಸಮರ್ಪಣೆ ಮಾಡಲಾಯಿತು.
ಶ್ರೀಪಾದ ಕಾಣೇಕರ್ ಸಂಗ್ರಹಿಸಿರುವ ಈ ಕೃತಿ ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ನಾಲ್ಕು ಪ್ರಮುಖ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಗೋಕರ್ಣ ಕ್ಷೇತ್ರದ ಪೌರಾಣಿಕ ಮಹತ್ವ, ಇಲ್ಲಿಯ ವಿವಿಧ ಶಿವಲಿಂಗಳ ಮಹತ್ವ ಹಾಗೂ ಲುಪ್ತವಾಗುತ್ತಿರುವ ತೀರ್ಥಕುಂಡಗಳ ವಿವಿರಗಳನ್ನು ಭಕ್ತರಿಗೆ ಮತ್ತು ಸಂಶೋಧಕರಿಗೆ ತಲುಪಿಸುವ ಉದ್ಧೇಶದಿಂದ ಈ ಕೃತಿ ಹೊರತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಗ್ರಂಥದೊಂದಿಗೆ ಗೋಕರ್ಣ ಕ್ಷೇತ್ರದ ವಿವಿಧ ಪವಿತ್ರ ಸ್ಥಳಗಳನ್ನು ಸೂಚಿಸುವ ಸಮಗ್ರ ನಕ್ಷೆಯನ್ನೂ ಪ್ರಕಟಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ ಸಹಕಾರಿಯಾಗಲಿದೆ. ಡಿಜಿಟಲ್ ಯುಗದ ಅವಶ್ಯಕತೆಯನ್ನು ಮನಗೊಂಡು ಮುದ್ರಿತ ಕೃತಿಯೊಂದಿಗೆ, ಇ-ಪುಸ್ತಕ ರೂಪದಲ್ಲಿಯೂ ಲಭ್ಯವಿದೆ’ ಎಂದು ಶ್ರೀಪಾದ ಕಾಣೇಕರ್ ಹೇಳಿದರು.
ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಉಪಾಧ್ಯಕ್ಷರಾಗಿರುವ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಪರಮೇಶ್ವರ ಪಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕುಮಟಾ ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ್, ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಅಡಿ, ಪರಮೇಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ ಮತ್ತು ತಾಂತ್ರಿಕ ಗಣಪತಿ ಗಜಾನನ ಹಿರೇ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.